ಚಿಕ್ಕಮಗಳೂರುನ್ಯೂಸ್

ದತ್ತಪೀಠದಲ್ಲಿರುವುದು ಔದುಂಬರ ವೃಕ್ಷ- ಅತ್ತಿ ಮರವಲ್ಲ, ಶಾಖಾದ್ರಿ ಕುಟುಂಬಸ್ಥರಿಂದ ಸಮಾಜವನ್ನು ದಿಕ್ಕು ತಪ್ಪಿಸುವ ಯತ್ನ

ದತ್ತಪೀಠದಲ್ಲಿರುವುದು ಔದುಂಬರ ವೃಕ್ಷ- ಅತ್ತಿ ಮರವಲ್ಲ, ಶಾಖಾದ್ರಿ ಕುಟುಂಬಸ್ಥರಿಂದ ಸಮಾಜವನ್ನು ದಿಕ್ಕು ತಪ್ಪಿಸುವ ಯತ್ನ


(CHIKKAMAGALURU): ಹಿಂದೂಗಳ ಪವಿತ್ರವಾದ ಧಾರ್ಮಿಕ ಗುರು ದತ್ತಾತ್ರೇಯ ಪೀಠದ ಆವರಣದಲ್ಲಿ ಇರುವುದು ಔದುಂಬರ ವೃಕ್ಷವೇ ಹೊರತು ಅಲ್ಲಿ ಯಾವುದೇ ಅತ್ತಿ ಮರಗಳು ಇಲ್ಲ ಎಂದು ವಿಶ್ವ ಹಿಂದೂ ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಹೇಳಿದ್ದಾರೆ.
ಶಾಖಾದ್ರಿ ವಂಶಸ್ಥ ಎಂದು ಹೇಳಿಕೊಳ್ಳುವ ಸೈಯ್ಯದ್ ಫಕ್ರುದ್ದಿನ್ ಎಂಬಾತ ದತ್ತಪೀಠದ ಕುರಿತು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಮೂಲಕ ಕೆಲವು ವಿವಾದಾತ್ಮಕವಾದ ಹೇಳಿಕೆಯನ್ನು ನೀಡಿ ಸಮಾಜದ, ಜನರ ದಾರಿ ತಪ್ಪಿಸುವ ಯತ್ನ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದೂಗಳ ಧಾರ್ಮಿಕ ಕೇಂದ್ರದ ಆವರಣವಾದ ಗುರು ದತ್ತಾತ್ರೇಯರ ತಪೋಭೂಮಿಯಲ್ಲಿ ಇರುವಂತಹ ಔದುಂಬರ ವೃಕ್ಷವನ್ನು ಒಂದು ಅತ್ತಿ ಮರಕ್ಕೆ ಹೋಲಿಸಿ ಮಾತನಾಡಿರುವುದು ಇಡೀ ಹಿಂದೂ ಸಮಾಜಕ್ಕೆ ಮತ್ತು ದತ್ತಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ.


ಅಷ್ಟೇ ಅಲ್ಲದೇ ಸೈಯ್ಯದ್ ಫಕ್ರುದ್ದಿನ್ ಅವರು ದತ್ತಪೀಠದಲ್ಲಿ ನಮ್ಮ ತಾತನ ಗೋರಿಗಳಿಗೆ ಕುಂಕುಮ ಮತ್ತು ಅರಿಶಿಣ ಹಾಕಿ, ತೆಂಗಿನ ಕಾಯಿ ಒಡೆದಿದ್ದಾರೆ ಎಂದು ಪೊಲೀಸ್ ಇಲಾಖೆಗೆ ಸುಳ್ಳು ದೂರನ್ನು ಸಹ ಕೊಟ್ಟಿರುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ.
ಶಾಖಾದ್ರಿ ಕುಟುಂಬಸ್ಥರಿಗೆ ಅವರ ವಂಶಸ್ಥರ ಗೋರಿಗಳಿಗೆ ಗೌರವ ಸಲ್ಲಿಸುವ ಮನಸ್ಸು ಇದ್ದರೆ ಸರ್ವೆ ನಂ.57ರ ನಾಗೇನಹಳ್ಳಿಯಲ್ಲಿ ಇರುವಂತಹ ಬಾಬಾಬುಡನ್ ದರ್ಗಾಕ್ಕೆ ಹೋಗಿ ಸಲ್ಲಿಸಬೇಕು. ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ಹಾಗೂ ಪಹಣಿಯಲ್ಲಿ ಕೂಡ ಬಾಬಾ ಬುಡನ್ ದರ್ಗಾ ಸ.ನಂ.57 ನಾಗೇನಹಳ್ಳಿ ಗ್ರಾಮ ಎಂದೇ ಉಲ್ಲೇಖಿತವಾಗಿದೆ. ಹಾಗೆಯೇ ಸ.ನಂ.195ರಲ್ಲಿ ಶ್ರೀ ದತ್ತಾತ್ರೇಯ ಪೀಠ ಎಂದು ಉಲ್ಲೇಖವಿದೆ. ಇದನ್ನು ಮೊದಲು ಅರ್ಥೈಸಿಕೊಂಡು ಶಾಖಾದ್ರಿ ಕುಟುಂಬಸ್ಥರು ಎನ್ನುತ್ತಿರುವವರು ಅರ್ಥೈಸಿಕೊಳ್ಳಬೇಕಿದೆ.
ಶಾಖಾದ್ರಿ ವಂಶಸ್ಥರ ಸಮಾಧಿಗೆ ಹೋಗಿ ಪೂಜೆ ಮಾಡುವಷ್ಟು ಮೂರ್ಖರು ಹಿಂದೂ ಸಂಘಟನೆಯವರಲ್ಲ. ಹಿಂದೂಗಳು ಪೂಜೆ ಮಾಡಿದ್ದು ದತ್ತಾತ್ರೇಯರ ಪ್ರಿಯವಾದ ಔದುಂಬರ ವೃಕ್ಷಕ್ಕೂ ಮತ್ತು ಹಿಂದೂಗಳ ಪವಿತ್ರ ತುಳಸಿ ಕಟ್ಟೆಗೆ.
ಶಾಖಾದ್ರಿ ಕುಟುಂಬಸ್ಥರು ಹೇಳುತ್ತಿರುವ ಹಾಗೆ ದತ್ತಪೀಠದಲ್ಲಿ ಆವರಣದಲ್ಲಿ ಇರುವಂತಹದ್ದು ಯಾವುದೂ ಕೂಡ ನೈಜವಾದ ಗೋರಿಗಳೇ ಅಲ್ಲ. ಅದು ಕೇವಲ ಮಣ್ಣು, ಕಲ್ಲಿನ ರಾಶಿಗಳು. ಅಷ್ಟೇ ಅಲ್ಲದೇ ಔದುಂಬರ ಮರದ ಪಕ್ಕದಲ್ಲಿ ಇರುವುದು ಕೂಡ ಗೋರಿಯಲ್ಲ. ಶಾಖಾದ್ರಿ ವಂಶಸ್ಥರು ಹುಟ್ಟುವ ಸಾವಿರಾರು ವರ್ಷಗಳ ಹಿಂದೆಯೇ ದತ್ತಾತ್ರೇಯರು ದತ್ತಪೀಠದಲ್ಲಿ ತಪಸ್ಸು ಐತಿಹ್ಯಗಳು ಇವೆ ಮತ್ತು ಅದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ಅಲ್ಲಿ ಇರುವ ಔದುಂಬರ ಮರವಾಗಿದೆ.


ಹಿಂದೂಗಳ ಐತಿಹ್ಯದ ಪ್ರಕಾರ ಔದುಂಬರ ಮರ ಎಲ್ಲಿ ಬೇಕೋ ಅಲ್ಲಿ ಇರುವಂತಹ ವೃಕ್ಷವಲ್ಲ. ದತ್ತಾತ್ರೇಯರು ತಪಸ್ಸು ಮಾಡಿರುವ ಸ್ಥಳ ಮತ್ತು ದತ್ತಾತ್ರೇಯರನ್ನು ಪೂಜಿಸಲ್ಪಡುವ ಸ್ಥಳದಲ್ಲಿ ಮಾತ್ರ ಇರುವಂತ ಪವಿತ್ರ ವೃಕ್ಷ ಅದು. ಅದನ್ನು ಜಿಲ್ಲಾಡಳಿತ ಮತ್ತು ದತ್ತಪೀಠದ ವ್ಯವಸ್ಥಾಪನಾ ಸಮಿತಿ ಗಮನಿಸಬೇಕಿದೆ. ದತ್ತಪೀಠದಲ್ಲಿರುವ ಔದುಂಬರ ವೃಕ್ಷದ ಸುತ್ತಲಿನ ಆವರಣವನ್ನು ಜಿಲ್ಲಾಡಳಿತ ಕೂಡಲೇ ಅಭಿವೃದ್ಧಿಪಡಿಸಿ ಭಕ್ತರಿಗೆ ಪೂಜೆ ಸಲ್ಲಿಸಲು ಮತ್ತು ಪ್ರದಕ್ಷಿಣೆ ಹಾಕಲು ಅನುಕೂಲ ಮಾಡಿಕೊಡಬೇಕಾಗಿ ಒತ್ತಾಯಿಸುತ್ತೇವೆ ಎಂದರು.
ಶಾಖಾದ್ರಿ ಕುಟುಂಬದವರು ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಆದೇಶವನ್ನು ಮೀರಿ ಇಲ್ಲ ಸಲ್ಲದ ಅವರ ಧಾರ್ಮಿಕ ಆಚರಣೆಗಳನ್ನು ದತ್ತಪೀಠದ ಆವರಣದಲ್ಲಿ ನೆರವೇರಿಸಲು ಪ್ರಯತ್ನ ಪಡುತ್ತಿದ್ದಾರೆ. ಅಲ್ಲದೇ ನ್ಯಾಯಾಲಯದ ಆದೇಶದ ಪ್ರಕಾರ 200 ಮೀಟರ್‌ನ ಸುತ್ತಳತೆಯಲ್ಲಿ ಮಾಂಸಾಹಾರ ನಿಷೇಧವಿದ್ದರೂ ಕೂಡ ಅಧಿಕಾರಿಗಳ ಕಣ್ತಪ್ಪಿಸಿ ಮಾಂಸಾಹಾರ ತಯಾರಿಸಿ ಸೇವನೆ ಮಾಡುತ್ತಿದ್ದಾರೆ.
ಈ ಬಗ್ಗೆಯೂ ಕೂಡ ಜಿಲ್ಲಾಡಳಿತ, ವ್ಯವಸ್ಥಾಪನಾ ಸಮಿತಿ ಗಮನಿಸಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Scan the code