ನ್ಯೂಸ್ಶಿವಮೊಗ್ಗ

ನಾವು ಶ್ರದ್ಧೆಯಿಂದ ಯಾವುದನ್ನು ಕಲಿತರೂ ಅದರಿಂದ ನಮಗೆ ನಷ್ಟವಾಗುವುದಿಲ್ಲ.

ನಾವು ಶ್ರದ್ಧೆಯಿಂದ ಯಾವುದನ್ನು ಕಲಿತರೂ ಅದರಿಂದ ನಮಗೆ ನಷ್ಟವಾಗುವುದಿಲ್ಲ.

(SHIVAMOGA): ಸಾಗರ : ನಾವು ಶ್ರದ್ಧೆಯಿಂದ ಯಾವುದನ್ನು ಕಲಿತರೂ ಅದರಿಂದ ನಮಗೆ ನಷ್ಟವಾಗುವುದಿಲ್ಲ. ಯಾವತ್ತೂ ವಿದ್ಯೆಯ ಕಲಿಕೆ ಅಂತಹ ಶ್ರದ್ಧೆಯನ್ನು ಬಯಸುತ್ತದೆ ಎಂದು ಆಂತರಿಕ ಲೆಕ್ಕಪರಿಶೋಧಕ ಬಿ.ವಿ.ರವೀಂದ್ರನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾರದಾಪುರದ ಇಕ್ಕೇರಿ ಪ್ರೌಢಶಾಲೆಯಲ್ಲಿ ಅರವಿಂದ ಟ್ರಸ್ಟ್ ಸಂಸ್ಥೆಯು ಒಂಬತ್ತನೆ ತರಗತಿ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ನೋಟ್  ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.


ಖಾಲಿ ನೋಟ್ ಪುಸ್ತಕದಲ್ಲಿ ಬರೆದುದು ಕೇವಲ ಅಕ್ಷರಗಳಾಗಿರದೆ ಬದುಕು ರೂಪಿಸುವ ಜ್ಞಾನವಾಗಿರುತ್ತದೆ. ಈ ನೋಟ್ ಪುಸ್ತಕವನ್ನು ಶಿಸ್ತುಬದ್ಧವಾಗಿ ಇರಿಸಿಕೊಳ್ಳುವುದು ತುಂಬಾ ಮುಖ್ಯ. ನಮ್ಮ ಸಂಸ್ಥೆ ಈ ವರ್ಷ ಒದಗಿಸಿದ ನೋಟ್ ಪುಸ್ತಕಗಳನ್ನು ಹಾಳು ಮಾಡದೆ, ಪರಿಪೂರ್ಣ ರೀತಿಯಲ್ಲಿ ಬಳಸಿಕೊಂಡ ವಿದ್ಯಾರ್ಥಿಗಳಿಗೆ ಬಹುಮಾನ ಕೊಡುವ ಹೊಸ ಯೋಜನೆಯನ್ನು ರೂಪಿಸಿದೆ ಎಂದು ಘೋಷಿಸಿದರು.
ಸಂಸ್ಥೆಯ ಹೆಚ್.ಆರ್. ಸುಮಾ ಮಾತನಾಡಿ, ನಮ್ಮ ಸಂಸ್ಥೆಯ ಉದ್ಯೋಗಿಗಳು ಸೇರಿ ರೂಪಿಸಿರುವ ಅರವಿಂದ ಟ್ರಸ್ಟ್ ವಿಶಿಷ್ಟವಾದುದು. ತಮ್ಮ ವೇತನದಲ್ಲಿ ಅವರು ಒಂದು ಭಾಗವನ್ನು ಉಳಿತಾಯ ಮಾಡಿ ಅದರ ಆಧಾರದಲ್ಲಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಡಮಕ್ಕಳಿಗೆ ಉಚಿತ ನೋಟ್‍ಪುಸ್ತಕಗಳನ್ನು ವಿತರಿಸುವುದು, ಉದ್ಯೋಗಿಗಳ ಕುಟುಂಬದಲ್ಲಿನ ಸದಸ್ಯರು ಅನಾರೋಗ್ಯಕ್ಕೊಳಗಾದರೆ ಅವರಿಗೆ ಆರ್ಥಿಕ ಬೆಂಬಲ ಕೊಡುವಂತಹ ಕೆಲಸವನ್ನೂ ಈ ಟ್ರಸ್ಟ್ ಮಾಡುತ್ತದೆ. ಹಿಂದಿನ ವರ್ಷ ನಾವು ಆರು ಸಾವಿರ ನೋಟ್ ಪುಸ್ತಕಗಳನ್ನು ಹಂಚಿದ್ದೆವು. ಈ ಬಾರಿ ಹತ್ತು ಸಾವಿರ ನೋಟ್ ಪುಸ್ತಕಗಳನ್ನು ವಿತರಿಸಲು ಸಜ್ಜಾಗಿದ್ದೇವೆ ಎಂದು ತಿಳಿಸಿದರು.
ಇಕ್ಕೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಟಿ.ರತ್ನಾಕರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ತಜ್ಞ ನಾರಾಯಣಮೂರ್ತಿ ಪಿ.ಡಿ., ಅರವಿಂದ ಟ್ರಸ್ಟ್‍ನ ಎಂ.ಎಸ್. ರಮೇಶ್, ಅರ್ಜುನ್, ಇಕ್ಕೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಜನೀಶ್ ಸಿ. ಇನ್ನಿತರರು ಇದ್ದರು. ಟಿ.ಎಸ್.ತಿಲಕಾಂಬಾ ಸ್ವಾಗತಿಸಿದರು. ಉಮೇಶ್ ವಂದಿಸಿದರು. ಎಸ್.ಜಿ.ಶ್ರೀಕಾಂತ್ ಹಾಗೂ ರಾಮಚಂದ್ರ ಹೆಗಡೆ ನಿರೂಪಿಸಿದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code