‘ಏನೇ ಹೇಳಿ ಸರ್ ಕಾಲೇಜ್ಗಿಂತ ಶಾಲೆಲಿ ಇದ್ದದ್ದೇ ಚೆಂದ ಇತ್ತು’
‘ಆದರೂ, ನೀವು ನಮ್ಮ ಕಾಲೇಜ್ಗೆ ಬರ್ತಿರ ಅಂತ ಅನ್ಕೊಂಡೇ ಇರಲಿಲ್ಲ ಸರ್’
ಅದು ಮಕ್ಕಳ ದಸರಾ ಸಮಯ. ಸಾಮಾನ್ಯವಾಗಿ ಮಕ್ಕಳ ದಸರಾದ ಉದ್ಘಾಟನೆಯನ್ನು ಪ್ರತೀವರ್ಷವೂ ಶಿವಮೊಗ್ಗ ಜಿಲ್ಲೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಂದ ಉದ್ಘಾಟನೆ ಮಾಡಿಸುತ್ತಿದ್ದರು. ಅವರ ಮಾತುಗಳು ಇತರ ಮಕ್ಕಳಿಗೆ ಪ್ರೇರಣೆಯಾಗುತ್ತದೆ ಎಂದು ತಿಳಿದಿದ್ದರು. ಬಹಳಷ್ಟು ವರ್ಷ ನಮ್ಮ ಶಾಲೆಯ ವಿದ್ಯಾರ್ಥಿಗಳು ‘ಮಕ್ಕಳ ದಸರಾದ ಉದ್ಘಾಟನೆ’ ಮಾಡಿರುವುದನ್ನು ನೋಡಿದ್ದೇನೆ. ಆ ಮಕ್ಕಳನ್ನು ಉದಾಹರಣೆಯಾಗಿ ನೀಡಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಪ್ರೇರಣೆಯನ್ನು ನೀಡುವ ಪ್ರಯತ್ನವನ್ನು ಮಾಡಲಾಗಿದೆ.
ಈ ಬಾರಿಯ ಮಕ್ಕಳ ದಸರಾದಲ್ಲಿಯೂ ಆ ರೀತಿಯಲ್ಲಿಯೇ ಆಗಬಹುದೆಂದೆಣಿಸಿದ್ದೆವು. ಆದರೆ ಹಾಗಾಗಲಿಲ್ಲ. ಆರಂಭವನ್ನು ಈ ಕಮಿಟಿಯ ಸದಸ್ಯರೇ ಮಾಡಿದ್ದರು, ಎಸ್.ಎಸ್.ಎಲ್.ಸಿ ಯಲ್ಲಿ ಶಿವಮೊಗ್ಗ ನಗರದ ೫ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅದು ಯಾವ ಆಧಾರದಲ್ಲಿ ಎನ್ನುವುದು ತಿಳಿಯಲೇ ಇಲ್ಲ. ಅಂತು ಗಡಿಬಿಡಿಯಲ್ಲಿ ಮಕ್ಕಳಿಗೆ ಈ ಮಾಹಿತಿಯನ್ನು ತಿಳಿಸುವ ಪ್ರಯತ್ನ ಮಾಡಿದರು.
ಈ ಮಕ್ಕಳನ್ನು ವೇದಿಕೆಗೆ ಕರೆದು ಹಿಂದಿನ ಸಾಲಿನಲ್ಲಿ ಕೂರಿಸಲಾಯಿತು. ವೇದಿಕೆಯಲ್ಲಿ ರಿಯಾಲಿಟಿ ಶೋಗಳಲ್ಲಿ ಬಂದ ‘ಪ್ರತಿಭೆ’ಗಳಿಂದ ದಸರಾ ಉದ್ಘಾಟನೆಯನ್ನು ಮಾಡಿಸಲಾಯಿತು. ಈ ಮಕ್ಕಳನ್ನು ಸೌಜನ್ಯಕ್ಕೂ ಕರೆಯಲೇ ಇಲ್ಲ. ನಂತರದಲ್ಲಿ ಒಂದು ನೆನಪಿನ ಕಾಣಿಕೆಯನ್ನು ನೀಡಿ ಕಳಿಸಿಕೊಡಲಾಯಿತು.
ಆಯೋಜನೆಯ ಬಗ್ಗೆ ಪೋಷಕರು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು. ಆದರೆ ಏನೂ ಮಾಡುವಂತಿರಲಿಲ್ಲ. ಬಹಳ ದಿನದ ನಂತರ ಸಿಕ್ಕ ಶಿವಮೊಗ್ಗ ಜಿಲ್ಲೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಪ್ರಣಮ್ಯ, ಹರ್ಷಿತ ಇಬ್ಬರೂ ತಮ್ಮ ಕಾಲೇಜ್ ಜೀವನದ ಬಗ್ಗೆ ಹೇಳುತ್ತಿದ್ದರು. ‘ಏನೇ ಹೇಳಿ ಸರ್ ಕಾಲೇಜ್ಗಿಂತ ಶಾಲೆಲಿ ಇದ್ದದ್ದೇ ಚೆಂದ ಇತ್ತು’ ಎಂದರು. ಬಿಡುವಿಲ್ಲದ ತರಗತಿ, ಪರೀಕ್ಷೆಗಳ ನಡುವೆ ಕಳೆದುಹೋಗಿದ್ದೇವೆ… ಹೀಗೆ ಒಂದಿಷ್ಟು ಅನುಭವಗಳನ್ನು ಹಂಚಿಕೊoಡರು. ‘ಬಿಡುವಿದ್ದಲ್ಲಿ ಒಮ್ಮೆ ಕಾಲೇಜ್ಗೆ ಬನ್ನಿ ಸರ್’ ‘ನಮ್ಮ ಉಪನ್ಯಾಸರು, ಪ್ರಾಂಶುಪಾಲರ ಜೊತೆಗೆ ಮಾತನಾಡಿ, ತುಂಬಾ ಪರೀಕ್ಷೆಗಳು, ಬರೆಯೋದು, ಓದೋದನ್ನು ಮಾಡಿಸಬೇಡಿ ಅಂತ ಹೇಳಿ’ ಎಂಬ ಬೇಡಿಕೆಯನ್ನಿಟ್ಟರು. ‘ಕಾಲೇಜ್ಗೆ ಬರಬಹುದೇನೋ ಆದರೆ ಈ ಬೇಡಿಕೆ ಈಡೇರಿಸುವುದು ಸಾಧ್ಯವೇ ಇಲ್ಲ ಬಿಡಿ’ ಎಂದಾಗ. ‘ಸರಿ ಕಾಲೇಜ್ಗಾದರೂ ಬನ್ನಿ, ಬಹಳಷ್ಟು ನಮ್ಮ ಶಾಲೆ ವಿದ್ಯಾರ್ಥಿಗಳು ಅಲ್ಲೇ ಇದೀವಿ’ ಎಂದರು. ‘ಸರಿ ಈ ವಾರದಲ್ಲಿ ಯಾವುದಾದರೂ ಮಧ್ಯಾಹ್ನ ಬರುವೆ’ ಎಂದೆ. ‘ಇನ್ನೂ ಮಾತನಾಡುವುದಿದೆ. ಆದರೆ, ನಾಳೆ ಪರೀಕ್ಷೆ ಇದೆ’ ಎಂದು ಜೊತೆಗೆ ಫೋಟೋ ತೆಗೆಸಿಕೊಂಡು ಹೊರಟರು.
ಅಂದು ಗುರುವಾರ ನಮ್ಮ ರೇಡಿಯೋ ಶಿವಮೊಗ್ಗದಲ್ಲಿ ಒಂದಿಷ್ಟು ಕೆಲಸಗಳಿದ್ದವು ಅದನ್ನು ಮುಗಿಸಿಕೊಂಡು ೧೨.೦೦ಕ್ಕೆ ಸರಿಯಾಗಿ ಕಾಲೇಜ್ ಬಳಿಗೆ ಬಂದೆ. ಆಗ ತಾನೇ ಊಟಕ್ಕೆ ಬಿಟ್ಟಿದ್ದರು. ದೂರದಲ್ಲಿದ್ದ ಅಬ್ದುಲ್ ಜಬ್ಬರ್ ಮತ್ತು ಸುಧನ್ವ ಇಬ್ಬರೂ ನನ್ನನ್ನು ಗುರುತಿಸಿ ಬಳಿಗೆ ಬಂದರು. ‘ಏನು ಸರ್ ನೀವು ನಮ್ಮ ಕಾಲೇಜ್ಗೆ ಬಂದೀದಿರಿ?’ ಎಂದರು. ‘ನಿಮ್ಮನ್ನೆಲ್ಲ ನೋಡಿ ಮಾತನಾಡಿಸಿಕೊಂಡು ಹೋಗೋಣ ಅಂತ’ ಅಂದೆ. ಅಷ್ಟರಲ್ಲಿ ಇನ್ನೂ ಅನೇಕ ವಿದ್ಯಾರ್ಥಿಗಳು ಬಂದರು ಅಲ್ಲಿಯೇ ನಿಂತು ಮಾತನಾಡತೊಡಗಿದೆವು. ಬೇರೆಬೇರೆ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ನಮ್ಮನ್ನೆಲ್ಲ ದಿಟ್ಟಿಸಿನೋಡುತ್ತಿದ್ದರು.
ಅಷ್ಟರಲ್ಲಿ ಆ ಕಾಲೇಜ್ನ ಪ್ರಾಚಾರ್ಯರು ಬಂದರು. ಪರಿಚಯವಿದ್ದುದರಿಂದ ‘ನಿಮ್ಮ ಮಕ್ಕಳ ಜೊತೆಗೆ ಆರಾಮಾಗಿ ಮಾತನಾಡಿ ನಾನು ನಂತರ ಸಿಗುತ್ತೇನೆ’ ಎಂದರು. ಅಷ್ಟರಲ್ಲಿ ಲಹರಿ, ‘ನಮ್ಮ ಪ್ರಿನ್ಸಿಪಲ್ ಸರ್ ನಿಮಗೆ ಗೊತ್ತಾ?’ ಎಂದಳು. ಅದಕ್ಕೆ ಸಂಜನಾ, ‘ನಮ್ಮ ಸರ್ಗೆ ಎಲ್ಲರ ಪರಿಚಯನೂ ಇದೆ ಅನ್ಸತ್ತೆ’ ಎಂದಳು. ‘ಹಾಗಿದ್ದರೆ ನಮಗೆ ಒಂದೆರಡು ದಿನ ಹೆಚ್ಚು ರಜೆ ಕೊಡೋಕೆ ಹೇಳಿ’ ಎಂಬ ಬೇಡಿಕೆ ಸ್ನೇಹಳಿಂದ ಬಂತು. ‘ಅಷ್ಟೆಲ್ಲ ಏನೂ ಇಲ್ಲ. ಬಹಳ ಹಿಂದೆ ಇವರು ನಮ್ಮ ಶಾಲೆಗೆ ಬಂದಿದ್ದರು. ಆಗ ಪರಿಚಯ ಅಷ್ಟೆ’ ಎಂದಾಗ ‘ಹೋ’ ಎಂಬ ಉದ್ಘಾರ ಎಲ್ಲರಿಂದ. ಊಟದ ಸಮಯವಾದ್ದರಿಂದ ಕೆಲವು ಮಕ್ಕಳು ‘ಸರ್ ಬೇಗ ಊಟ ಮಾಡಿಕೊಂಡು ಬರ್ತಿವಿ. ನೀವು ಇರ್ತಿರಾ ತಾನೇ?’ ಎಂದರು ಧಾರಾಳವಾಗಿ ಹೋಗಿಬನ್ನಿ ಎಂದೆ. ಕೆಲವು ಮಕ್ಕಳು ‘ಅವರು ಊಟ ಮಾಡಿಕೊಂಡು ಬರುವ ತನಕ ನಾವು ನಿಮ್ಮ ಜೊತೆಗೆ ಮಾತನಾಡುತ್ತೇವೆ’ ಎಂದು ಇನ್ನೂ ಕೆಲವರು ಬಳಿಯೇ ನಿಂತರು. ‘ನಿಮಗೆ ಕಾಲೇಜ್ ಇಂದಾನೇ ಊಟ ಕೊಡ್ತಾರೆ ಅನ್ಸತ್ತೆ, ಚಪಾತಿ, ಪಲ್ಯ, ಅನ್ನ-ಸಾರು…’ ಎಂದು ನಿಧಿ ಹೇಳಿದಳು ಎಲ್ಲರೂ ನಕ್ಕರು. ಅಷ್ಟರಲ್ಲಿ ಚಿನ್ಮಯಿ, ‘ಆದರೂ, ನೀವು ನಮ್ಮ ಕಾಲೇಜ್ಗೆ ಬರ್ತಿರ ಅಂತ ಅನ್ಕೊಂಡೇ ಇರಲಿಲ್ಲ ಸರ್’ ಎಂದಳು. ‘ನಾನು ಬರುತ್ತೇನೆ ಎಂದು ಪ್ರಣಮ್ಯ ಹಾಗೂ ಹರ್ಷಿತರಿಗೆ ಮಾತು ಕೊಟ್ಟಿದ್ದೆ ಹಾಗಾಗಿ ಬಂದಿದ್ದೇನೆ ಎಂದಾಗ ‘ಹೌದು’ ಎನ್ನುವಂತೆ ಇಬ್ಬರೂ ನಕ್ಕರು. ತಮ್ಮಗಳ ತರಗತಿಯ ಅವಧಿ, ಆಗುತ್ತಿರುವ ಪಾಠಗಳು, ಪರೀಕ್ಷೆಗಳು, ಬಿಡುವೇ ಇಲ್ಲದ ಓದು ಎಲ್ಲವನ್ನೂ ಒಬ್ಬೊಬ್ಬರು ಹೇಳ ತೊಡಗಿದರು. ಅಷ್ಟರಲ್ಲಿ ಸೋಹನ್ ನನ್ನ ನೋಡಿದವನೇ ಖುಷಿಯಿಂದ ಓಡಿ ಬಂದ, ‘ಹೇಗಿದರ ಸರ್? ಬಹಳ ದಿನ ಆಗಿತ್ತು ನಿಮ್ಮನ್ನು ನೋಡಿ’ ಎಂದನು. ನಾನು ಆರಾಮಾಗಿದ್ದೇನೆ, ನೀನು ಹೇಗಿದ್ದೀಯಾ? ಹಾಸ್ಟೆಲ್ ಜೀವನ ಹೇಗಿದೆ?’ ಎಂದು ವಿಚಾರಿಸಿದೆ. ಬಹುತೇಕರು ಊಟಡ ಡಬ್ಬಿಯನ್ನು ತಂದಿದರು. ಇವನು ಕಾಲೇಜ್ ಮೆಸ್ಗೆ ಹೋಗಬೇಕಿತ್ತು. ‘ನೀನು ಆರಾಮವಾಗಿ ಊಟ ಮಾಡಿಕೊಂಡು ಬಾ ಇಲ್ಲಿಯೇ ಇರುತ್ತೇನೆ’ ಎಂದಾಗ ‘ಬೇಗ ಬರ್ತಿನಿ’ ಎಂದು ಖುಷಿಯಿಂದ ಹೊರಟ.
ಬಹುತೇಕ ವಿದ್ಯಾರ್ಥಿಗಳು ಓಡೋಡಿ ಬಂದರು. ಪ್ರೀತಿಯಿಂದ ಮಾತನಾಡಿಸತೊಡಗಿದರು. ಕೆಲವು ವಿದ್ಯಾರ್ಥಿಗಳಂತು ನೋಡಿಯೂ ನೋಡದಂತೆ ಹೋದರು. ಅವರ ಕಡೆಗೂ ಸಣ್ಣನಗು ಬೀರಿದ್ದಾಯಿತು. ಆದರೆ ಪ್ರಯೋಜನವೂ ಆಗಲಿಲ್ಲ, ಅದನ್ನು ಅವರು ಗಮನಿಸಲೂ ಇಲ್ಲ. ಸಿಕ್ಕ ನೆಚ್ಚಿನ ವಿದ್ಯಾರ್ಥಿಗಳು ಶಾಲೆಯ ಬಗ್ಗೆ, ಎಲ್ಲಾ ಶಿಕ್ಷಕರ ಬಗ್ಗೆ ಕೇಳುತ್ತಿದ್ದರು. ಕೆಲವರಂತೂ ಇಲ್ಲಿ ತರಗತಿ ನಡೆಯುವಾಗ ನಮಗೆ ನಮ್ಮ ಶಾಲೆಯ ಶಿಕ್ಷಕರು ನೆನಪಿಗೆ ಬರುತ್ತಾರೆ ಎಂದು ತಿಳಿಸಿದರು. ಎಲ್ಲರದು ಏನು ತಿಂಡಿ? ಎಂದು ಕೇಳುವಾಗ ಒಬ್ಬೊಬ್ಬರು ತಾವು ತಂದದ್ದನ್ನು ತಿಳಿಸುತ್ತಿದ್ದರು. ಹರ್ಷಿತಳ ಮನೆಯಲ್ಲಿ ‘ಚಪಾತಿ’ ಎಂದು ನಾನೇ ಹೇಳಿದಾಗ ಹೌದು ಎಂದು ನಗುತ್ತ ತಲೆಯಾಡಿಸಿದಳು. ಚಪಾತಿ ಅವರ ಮನೆಯಲ್ಲಿ ಪ್ರತಿನಿತ್ಯ ಇದ್ದೇ ಇರುತ್ತದೆ ಎಂಬುದು ನಮಗೆಲ್ಲ ಗೊತ್ತಿದ್ದ ಸಂಗತಿಯಾಗಿತ್ತು. ಮಾತನಾಡಲು ತುಂಬಾ ಇದೆ. ಆದರೆ ಸಮಯ ಕಡಿಮೆ ಎಂದರು. ಹೆಗ್ಡೆ, ‘ಸರ್ ಒಂದು ಫೋಟೋ’ ಎಂದಳು. ಎಲ್ಲರೂ ಅದಕ್ಕೆ ದನಿಗೂಡಿಸಿದರು. ‘ಸರಿ ಬನ್ನಿ ಎಂದೆ’ ಸಂತೋಷದಿoದ ಪೋಟೋಗೆ ನಿಂತರು. ನಮಗೆ ಕಳಿಸಿ ಎಂದು ತರಗತಿಗೆ ತೆರಳಿದರು. ಆಗ ದ್ವಿತೀಯ ಪಿ.ಯು.ಸಿ ಓದುವ ವಿದ್ಯಾರ್ಥಿಗಳು ಊಟಕ್ಕೆ ಬರತೊಡಗಿದರು. ಹಿತೇಶ್ಸಿಂಧೆ, ನಯನ, ಜಾವೂರ್, ಶ್ರೇಯಸ್, ರೋಹನ್, ಸಹನ ಎಲ್ಲರೂ ಬಂದರು ಒಂದಿಷ್ಟು ಸಮಯ ಮಾತನಾಡಿದರು. ಚೆನ್ನಾಗಿ ಓದಲು ತಿಳಿಸಿದೆ ಎಲ್ಲರೂ ಊಟಕ್ಕೆ ತೆರಳಿದರು. ಸಹನ ನನ್ನ ಜೊತೆಗಿದ್ದಳು ಅವಳು ಬಹಳ ಹೊತ್ತು ಮಾತನಾಡಿದಳು. ಅವಳಿಗೂ ಊಟದ ಸಮಯವಾಗಿತ್ತು. ಅಷ್ಟರಲ್ಲಿ ಅರ್ಚನ (ಆಚಿ) ಧನ್ಯ ಇಬ್ಬರೂ ಬಂದರು. ಓದಿನ ಬಗ್ಗೆ ಕೇಳಿದರೆ ಅರ್ಚನ ಊಟದ ಬಗ್ಗೆ ಹೇಳ ತೊಡಗಿದಳು. ‘ಸರ್ ನನ್ನ ತಂಗಿ ಬೇಕಾದ ನಾನ್ವೆಜ್ ತರಿಸಿಕೊಂಡು, ಅಡುಗೆ ಮಾಡಿಸಿಕೊಳ್ತಾಳೆ. ಆದರೆ ಫಿಶ್ ತರೋಕೆ ಬಿಡಲ್ಲ, ಅವಳಿಗೆ ಸ್ವಲ್ಪ ಬುದ್ಧಿ ಹೇಳಿ’ ಎಂಬ ಅಡುಗೆಯ ಬಯಕೆಯನ್ನು ತಿಳಿಸಿದಳು. ‘ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ’ ಎಂದೆ. ನಂತರ ಫಾತೀಮ ಸಿಕ್ಕಳು ಅವಳೊಂದಿಗೆ ಓದಿನ ಬಗ್ಗೆ ಒಂದಿಷ್ಟು ಮಾತನಾಡಿ, ‘ಪರೀಕ್ಷೆಗೆ ಚೆನ್ನಗಿ ಸಿದ್ಧತೆ ಮಾಡಿಕೊ’ ಎಂದು ಹೇಳಿದೆ ಅಷ್ಟರಲ್ಲಿ ಬೆಲ್ ಆದ ಸಮಯಕ್ಕೆ ಸರಿಯಾಗಿ ದ್ವಿತೀಯ ಪಿ.ಯು.ಸಿಯ ಮಾರ್ಕ್ಸ್ ಕಾರ್ಡ್ ತೆಗೆದುಕೊಳ್ಳಲು ಶ್ರೇಯಾ ಬಂದಳು. ಅವಳನ್ನು ಮಾತನಾಡಿಸಿಕೊಂಡು ಪ್ರಾಶುಪಾಲರನ್ನು ಮಾತನಾಡಿಸಿಕೊಂಡು ತೆರಳಿದೆ.
ಸಂಜೆಗೆ ಪ್ರಣಮ್ಯಳ ಅಮ್ಮ ‘ಏನು ಸರ್ ಮಕ್ಕಳು ಶಾಲೆಮಕ್ಕಳ ಹಾಗೇ ಇದಾರಾ? ಬದಲಾಗಿದ್ದಾರಾ?’ ಎಂದರು.
ಕೆಲವರು ಬದಲಾಗಿದ್ದಾರೆ. ಪರಿವರ್ತನೆ ಜಗದ ನಿಯಮ. ಆದರೆ ಬಹುತೇಕ ಮಕ್ಕಳು ಇನ್ನೂ ‘ಮಕ್ಕಳ ಮನಸ್ಥಿತಿ’ ಉಳಿಸಿಕೊಂಡಿದ್ದಾರೆ ಎಂಬುದೇ ಸಂತೋಷದ ಸಂಗತಿ ಎಂದು ತಿಳಿಸಿದೆ.
ಶಾಲೆಗಿಂತಲೂ ಕಾಲೇಜ್ ಬದುಕು ವಿಭಿನ್ನ. ಬಿಡುವಿಲ್ಲದ ಓದು, ತರಗತಿ, ನೋಟ್ಸ್, ಪರೀಕ್ಷೆ ಎಂಬುದರಲ್ಲಿ ಮಕ್ಕಳು ಮುಳುಗಿರುತ್ತಾರೆ. ಅದರಲ್ಲೂ ಭೇಟಿಯಾದಾಗ ಒಂದಿಷ್ಟು ಶಾಲೆಯ ತಮ್ಮ ನೆನಪಿನ ಬಗ್ಗೆ ಹಂಚಿಕೊoಡ ಮಕ್ಕಳು, ಹಲವು ಶಿಕ್ಷಕರ ತರಗತಿ, ಪಾಠ ಎಲ್ಲವನ್ನೂ ಮೆಲುಕು ಹಾಕುವುದನ್ನು ಕೇಳಿದಾಗ, ಶಾಲಾ ಜೀವನವೇ ಚೆಂದವಾಗಿತ್ತು ಎನ್ನುವಾಗ ಆ ಮಕ್ಕಳ ಬಗೆಗಿದ್ದ ಅಭಿಮಾನ ಹೆಚ್ಚಾಗಿತ್ತು. ಮಕ್ಕಳು ಇನ್ನೂ ಮಕ್ಕಳಾಗಿಯೇ ಇದ್ದಾರಲ್ಲ ಎಂಬುದೇ ಸಂತೋಷದ ಸಂಗತಿ. ಕಾಲೇಜ್ನಲ್ಲಿ ಓದುತ್ತಿದ್ದರೂ, ಕೆಲಸದಲ್ಲಿಯೇ ಇದ್ದರೂ ಅವರುಗಳು ನಮ್ಮಗಳಿಗೆ ಸದಾ ಮಕ್ಕಳೇ ಆಗಿರುತ್ತಾರೆ. ಮಕ್ಕಳ ದಿನಾಚರಣೆಯ ಸಮಯದಲ್ಲಿ ಈ ಮಕ್ಕಳ ಬಗ್ಗೆ ಬರೆಯಬೇಕೆನಿಸಿದ್ದು ಅತಿಶಯೋಕ್ತಿಯಿಂದಲ್ಲ, ಅಭಿಮಾನದಿಂದ… ಎಷ್ಟೇ ಉನ್ನತ ಹಂತಕ್ಕೆ ಏರುತ್ತಾ ಹೋದರೂ ಮುಗ್ಧತೆಯ ಮಕ್ಕಳ ಮನಸ್ಥಿತಿ ಉಳಿಸಿಕೊಂಡಿರುವ ಎಲ್ಲಾ ಮಕ್ಕಳಿಗೂ ‘ಮಕ್ಕಳ ದಿನಾಚರಣೆ’ಯ ಈ ಪುಟ್ಟ ಬರಹ ಅರ್ಪಣೆ… ಇದಕ್ಕಿಂತ ಬೇಕೆ ಹೆಚ್ಚಿನ ವಿವರಣೆ?
ಚೇತನ್ ಸಿ ರಾಯನಹಳ್ಳಿ