ಮರ ಕಡಿಯುವ ವೇಳೆ ಹಗ್ಗ ತುಂಡಾಗಿ ವ್ಯಕ್ತಿ ಮೇಲೆ ಮರ ಬಿದ್ದು ಸಾವು.
(SHIVAMOGA): ಸಾಗರದ ತಾಳಗುಪ್ಪ ಸಮೀಪದ ಹಿರೇಮನೆಯಲ್ಲಿ ಕಡಿಯುತ್ತಿದ್ದ ಮರ ಆಯಾ ತಪ್ಪಿ ಅಶೋಕ 58 ವರ್ಷ ಎಂಬುವವರ ತಲೆ ಮೇಲೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಮನೆ ಸಮೀಪದಲ್ಲಿದ್ದ ಒಣ ಮರವನ್ನು ಕಾರ್ಮಿಕರು ಕಡಿಯುತ್ತಿದ್ದರು. ಮರಕ್ಕೆ ಕಟ್ಟಿದ ಹಗ್ಗವು ಹರಿದಿದ್ದರಿಂದ ನಿರೀಕ್ಷಿತ ಸ್ಥಳದಲ್ಲಿ ಮರ ಬೀಳದೆ ಸಮೀಪ ನಿಂತಿದ್ದ ಅಶೋಕರವರ ತಲೆ ಮೇಲೆ ಬಿದ್ದಿದೆ ಎನ್ನಲಾಗಿದೆ.
ತಕ್ಷಣವೇ ಸಾಗರದ ಆಸ್ಪತ್ರೆಗೆ ತೆರಳಿದಾಗ ಸಾವನ್ನು ಖಚಿತ ಪಡಿಸಿದ್ದು, ಸಾಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾದರಿ ಕೃಷಿಕರಾಗಿದ್ದ ಅಶೋಕರವರು ಬಿ ಜೆ ಪಿ ಕಾರ್ಯಕರ್ತರಾಗಿದ್ದರು. ಇವರ ದಾರುಣ ಸಾವಿಗೆ ಬಿ.ಜೆ.ಪಿ.ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಸಂತಾಪ ಸೂಚಿಸಿದ್ದಾರೆ. ಅವರಿಗೆ ಪತ್ನಿ ಹಾಗೂ ಒಬ್ಬ ಪುತ್ರಿ ಒಬ್ಬ ಮಗ ಇದ್ದಾರೆ.
ವರದಿ: ರಾಘವೇಂದ್ರ ತಾಳಗುಪ್ಪ