ಕುಟುಂಬದ ಆರ್ಥಿಕ ಸದೃಢತೆಯಲ್ಲಿ ಮಹಿಳೆಯ ಪಾತ್ರ ದೊಡ್ಡದು: ಶಾಸಕ ಬೇಳೂರು
(SHIVAMOGA): ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಲು ಮಹಿಳೆಯರು ಮೊದಲು ಅಡುಗೆ ಮನೆಯ ಡಬ್ಬದಲ್ಲಿ ಕೂಡಿಡುತ್ತಿದ್ದ ಹಣವನ್ನೀಗ ಧರ್ಮಸ್ಥಳ ಸಂಘಗಳ ಮೂಲಕ ಬ್ಯಾಂಕ್ ಖಾತೆ ತೆರೆದು ಅಲ್ಲಿಟ್ಟು ಬಡ್ಡಿಯನ್ನು ಪಡೆಯುತ್ತಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಂತಸ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ
ಸಂಘ ವತಿಯಿಂದ ಹೂಳು ತೆಗೆಸಿ ಸ್ವಚ್ಛ ಗೊಳಿಸಲಾಗಿದ್ದ ತಾಲೂಕಿನ ಕೆಳದಿಯ ಹಿರೇ ಕೆರೆಗೆ ಶ್ರಾವಣ ಶುಕ್ರವಾರದಂದು ಬಾಗಿನ ಅರ್ಪಿಸಿ, ಪಂಚಾಯತಿಯ ನೂತನ ಸಭಾಭವನ ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸ್ವಸಹಾಯ ಸಂಘದಿಂದ ಮಹಿಳೆಯರ ಜೀವನವು ಚಟುವಟಿಕೆಗೆ ಹೆಚ್ಚಿದ್ದು, ಆರ್ಥಿಕವಾಗಿಯೂ ಸದೃಢರಾಗಿದ್ದಾರೆ. ಜತೆಯಲ್ಲಿ ಹಣ ಕೂಡಿಟ್ಟು ಸಂಸಾರ ಸುಸೂತ್ರವಾಗಿ ನಡೆಸುವ ಮನಸ್ಥಿತಿ ಸಮಾಜದಲ್ಲಿ ಬೆಳೆದಿರುವುದು ಖುಷಿಯ ವಿಚಾರ.
ಇದರೊಂದಿಗೆ ಕುಟುಂಬದ ಆರೋಗ್ಯದ ವಿಚಾರದಲ್ಲಿಯೂ ಗಮನ ಹರಿಸಬೇಕಿದೆ. ಅದಕ್ಕಾಗಿ ಅಂಚೆಕಚೇರಿ, ಬ್ಯಾಂಕ್ ಮೊದಲಾದೆಡೆ ಆರೋಗ್ಯ ವಿಮೆ ಮಾಡಿಸುವುದು ಇಂದಿನ ಅಗತ್ಯತೆಯಲ್ಲೊಂದು. ರೋಗ ಬಂದಾಗ ಆಸ್ಪತ್ರೆ ವೆಚ್ಚ ನೋಡಿ ಪರಿತಪಿಸುವುದಕ್ಕಿಂತ, ಮೊದಲೇ ಎಚ್ಚೆತ್ತು ಆರೋಗ್ಯ ವಿಮೆ ಮಾಡಿಸಿಕೊಂಡರೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದರು.
ಕೆಳದಿ ಕೆರೆ, ಸುತ್ತಲಿನ ಇತಿಹಾಸದ ಬಗ್ಗೆ ಗಜಾನನ ಭಟ್ ರೇವಣಕಟ್ಟ ವಿಶೇಷ ಉಪನ್ಯಾಸ ನೀಡಿದರು. ಕೆಳದಿ ಗ್ರಾ.ಪಂ. ಅಧ್ಯಕ್ಷೆ ಸುಮಾ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಸಂಘದ ಸಿರಸಿ ವಲಯದ ನಿರ್ದೇಶಕ ಬಾಬೂ ನಾಯ್ಕ, ಸಾಗರ ವಿಭಾಗದ ಶಾಂತಾ ನಾಯ್ಕ್, ಕೆರೆ ಸಮಿತಿ ಅಧ್ಯಕ್ಷ ಸತ್ಯನಾರಾಯಣ, ಗ್ರಾಮ ಸಮಿತಿ ಅಧ್ಯಕ್ಷ ದ್ವಾವಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಸವಿತಾ, ಕಾರ್ಯದರ್ಶಿ ಲಕ್ಷ್ಮಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶ್ಫಾಕ್ ಅಹಮದ್, ಸದಸ್ಯರಾದ ಚೌಡಪ್ಪ, ದುರ್ಗಪ್ಪ, ಸಂದೀಪ್, ಎಚ್.ಎಸ್. ರಮೇಶ್, ಚಂದ್ರಕಲಾ, ಗೀತಾ ರಮೇಶ್, ಶ್ರುತಿ ರಮೇಶ್, ಮೊದಲಾದವರಿದ್ದರು.
ವರದಿ: ಅಣ್ಣಪ್ಪ ಕೆಳದಿಪುರ