ಮನರಂಜನೆ

‘ಪಾಠ ಮಾಡುವಾಗ ಅಲ್ಲ ಸರ್, ನೀವು ಕಥೆ ಹೇಳ್ತಾ ಇದ್ದಾಗ ಬರೆದದ್ದು’

‘ಪಾಠ ಮಾಡುವಾಗ ಅಲ್ಲ ಸರ್, ನೀವು ಕಥೆ ಹೇಳ್ತಾ ಇದ್ದಾಗ ಬರೆದದ್ದು’


‘ಮೋ… ಇದು ನಾನು ಅಂತ ನನಗೆ ಗೊತ್ತಾಗತ್ತೆ ಅಷ್ಟೇ’
ತರಗತಿಯಲ್ಲಿ ಪಾಠ ಮಾಡುವಾಗ ಕೀಟಲೆ ಮಾಡದ ಮಕ್ಕಳಿದ್ದಾರೇನು? ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಸಣ್ಣದಾಗಿ ಕಿರಿಕಿರಿ ಮಾಡಿದವರೇ ಆಗಿರುತ್ತಾರೆ. ಹಾಗಾಗಿ ಅದಕ್ಕೆ ಒಂದಿಷ್ಟು ಉಚಿತ ಉಡುಗೊರೆಗಳ ರೀತಿಯಲ್ಲಿ ಅವರವರ ‘ಪ್ರತಿಭೆ’ಗೆ ತಕ್ಕಂತೆ ಸಣ್ಣಪುಟ್ಟ ಶಿಕ್ಷೆಗಳು (ಶಿಕ್ಷಣಗಳು) ಸಿಕ್ಕಿರುತ್ತವೆ. ಕೆಲವರಂತೂ ಖುಷಿಯಿಂದ ಸ್ವೀಕರಿಸಿದ್ದಾರೆ, ಕೆಲವರು ಬೈದುಕೊಂಡು ಸ್ವೀಕರಿಸಿದ್ದಾರೆ, ಇನ್ನೂ ಕೆಲವರು ತಾವು ತಪ್ಪನ್ನೇ ಮಾಡಿಲ್ಲ ಎಂದು ವಾದಿಸಿದವರೂ ಇದ್ದಾರೆ. ಹೀಗೆ ಅನೇಕ ವರ್ಗದ ವಿದ್ಯಾರ್ಥಿಗಳನ್ನು ಕಂಡಿದ್ದೇವೆ.


ತರಗತಿಯಲ್ಲಿ ಮಾತನಾಡುವುದೋ, ಇನ್ನೇನೋ ಕಿರಿಕಿರಿ ಮಾಡಿದಾಗ ಅವರಿಗೆ ನಿಲ್ಲಿಸುವುದೋ, ಬೇರೆಕಡೆಯಲ್ಲಿ ಕೂರಿಸುವುದೋ, ತರಗತಿಯಿಂದ ಆಚೆಗೆ ಕಳಿಸುವುದೋ, ಪೆಟ್ಟು ಕೊಡುವುದೋ, ಒಂದಿಷ್ಟು ಪ್ರಶ್ನೋತ್ತರಗಳನ್ನು ನಾಳೆಗೆ ಮನೆಕೆಲಸದಲ್ಲಿ ಬರೆದುಕೊಂಡು ಬನ್ನಿ ಎಂದು ಹೇಳುವುದೋ ಈ ರೀತಿಯ ಒಂದಿಷ್ಟು ಚಟುವಟಿಕೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇದು ಎಲ್ಲಾ ಶಿಕ್ಷಕರಿಗೂ ಮಕ್ಕಳಿಗೂ ವೇದ್ಯವಾಗಿರುವ ಅಂಶವಾಗಿದೆ.
ಕೆಲ ವರ್ಷಗಳ ಹಿಂದೆ 9ನೇ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಶ್ರೀರಾಮ್‌ಸಾಚಿತ್ ಎಂಬ ವಿದ್ಯಾರ್ಥಿಯಿದ್ದ. ಒಂದಿಷ್ಟು ತರಲೆ ಇದ್ದದ್ದನ್ನು ಅವನೇ ಒಪ್ಪಿಕೊಳ್ಳುತ್ತಿದ್ದ. ಪಾಠ ಮುಗಿಸಿ ನೋಟ್ಸ್ ಬರೆಸುತ್ತಿದ್ದ ಸಮಯ, ಅಕ್ಕಪಕ್ಕದವರಿಗೆ ಕಿರಿಕಿರಿ ನೀಡುತ್ತ ಬರೆದುಕೊಳ್ಳುತ್ತಿದ್ದ ಇದನ್ನು ಗಮನಿಸಿ ‘ನೀನು ನಿಂತುಕೊAಡೇ ನೋಟ್ಸ್ ಬರ್ಕೋ’ ಎಂದೇ ಬೇಸರದಿಂದ ಎದ್ದು ನಿಂತು ಬರೆದುಕೊಳ್ಳತೊಡಗಿದನು. ಆದರೂ ಅಲ್ಲೂ ಸಣ್ಣಪುಟ್ಟ ಕಿರಿಕಿರಿ ಮಾಡತೊಡಗಿದ್ದ ‘ಹೀಗೆ ಮಾಡಿದರೆ ತರಗತಿಯಿಂದ ಆಚೆಗೆ ಹಾಕಬೇಕಾಗತ್ತೆ’ ಎಂದು ಗದರಿದ್ದಾಯಿತು. ತರಗತಿಯೂ ಮುಗಿಯಿತು. ‘ಮುಂದಿನ ತರಗತಿಯ ಶಿಕ್ಷಕರು ಬರುವ ತನಕ, ಅವರು ಕುಳಿತುಕೊಳ್ಳಲು ಹೇಳುವ ತನಕ ಹೀಗೆ ನಿಂತಿರು’ ಎಂದು ಹೊರಟೆ.


ಶಶಿಶಂಕರ್ ಮೇಡಂ ಇಂಗ್ಲೀಷ್ ತರಗತಿ ತೆಗೆದುಕೊಳ್ಳುತ್ತಿದ್ದ ಸಮಯ. ಅವರ ತರಗತಿಯಲ್ಲೂ ಈತ ಕಿರಿಕಿರಿ ಮಾಡಿದ್ದಾನೆ ಅವರು ಅವನನ್ನು ಆ ಜಾಗದಿಂದ ಏಳಿಸಿ ಮೊದಲ ಬೆಂಚ್‌ನ ಪಕ್ಕದಲ್ಲಿ ನೆಲದಲ್ಲಿ ಕೂರಿಸಿದರು. ಎಲ್ಲರಿಗೂ ಘಟಕ ಪರೀಕ್ಷೆಗೆ ಸಂಬoಧಿಸಿದoತೆ ಒಂದಿಷ್ಟು ಪ್ರಶ್ನೆಗಳನ್ನು ನೀಡಿ ಉತ್ತರಿಸಲು ಹೇಳಿದ್ದಾರೆ. ಇವನು ಬಹುಬೇಗ ಉತ್ತರ ಬರೆದು ಮಾಡಲು ಬೇರೆ ಕೆಲಸವಿಲ್ಲದೆ, ಪಕ್ಕದಲ್ಲಿ ಮಾತನಾಡಲು ಯಾರೂ ಇಲ್ಲದೇ ನೆಲದ ಮೇಲೆ ಏನನ್ನೋ ಗೀಚುತ್ತಾ ಕುಳಿತಿದ್ದಾನೆ. ತರಗತಿ ಮುಗಿಯುವ ಸಮಯಕ್ಕೆ ಸರಿಯಾಗಿ ಮೇಡಂ ಅವನು ನೆಲದಲ್ಲಿ ಬರೆದಿದ್ದದ್ದನ್ನು ನೋಡಲು ಮುಂದಾದಾಗ ‘ಏನಿಲ್ಲ ಮೇಡಂ’ ಎಂದು ಅದರ ಮೇಲೆ ಪುಸ್ತಕ, ನೋಟ್ಸ್ ಹರಡಿದ, ಮೇಡಂ ಒತ್ತಾಯ ಮಾಡಿ ನೋಡಿದಾಗ ಆ ನೆಲದಲ್ಲಿ ಶಿವನ ಮುಖದ ಚಿತ್ರವನ್ನು ಬರೆದಿದ್ದಾನೆ. ಮೇಡಂಗೆ ಏನು ಹೇಳಬೇಕೋ ತಿಳಿಯಲಿಲ್ಲ. ಒಂದೆಡೆ ಚೆಂದದ ಚಿತ್ರವೂ ಇದೆ, ತರಗತಿಯಲ್ಲಿ ಇವನ ಕಿರಿಕಿರಿಯೂ ಇದೆ. ‘ಯಾವುದೇ ಕಾರಣಕ್ಕೂ ಇದನ್ನು ಅಳಿಸಬೇಡ’ ಎಂದು ಹೇಳಿ ತರಗತಿಯಿಂದ ಆಚೆ ಬಂದರು. ಆ ತರಗತಿಯ ನಂತರ ಒಬ್ಬರು ಶಿಕ್ಷಕರು ಶಾಲೆಗೆ ರಜೆ ಮಾಡಿದ್ದ ಕಾರಣ ಮತ್ತೊಮ್ಮೆ ನನ್ನದೇ ಹೆಚ್ಚುವರಿ ತರಗತಿ ಇತ್ತು. ಅಲ್ಲಿಗೆ ಹೋಗುವ ಮುನ್ನ ಮೇಡಂ ಈತನ ಚಿತ್ರವನ್ನು ಗಮನಿಸುವಂತೆ ತಿಳಿಸಿದರು. ತರಗತಿ ಹೋದರೆ ಮಕ್ಕಳೆಲ್ಲ ನಗುತ್ತಿದ್ದಾರೆ, ನೆಲದಲ್ಲಿ ನೋಡಿದರೆ ಆ ಧೂಳಿನಲ್ಲೂ ಚಿತ್ರವನ್ನು ಬರೆದಿದ್ದಾನೆ, ನೆಲದ ಮೇಲೆ ಕುಳಿತಾಗ ಈ ರೀತಿಯ ಪ್ರತಿಭೆ ಬಂದಿದೆ.

ಈತನಿಗೆ ಹೊಡೆಯುವುದು, ಬೈಯುವುದು ಮಾಡುವ ಹಾಗಿರಲಿಲ್ಲ. ‘ತಮ್ಮ ಸುಮ್ಮನೆ ಕೂತ್ಕೊಂಡು ನೋಟ್ಸ್ ಬರೆದುಕೊಂಡರೆ ಒಳ್ಳೆಯದು’ ಎಂಬ ಎಚ್ಚರಿಕೆಯನ್ನು ಮೊದಲೇ ನೀಡಿ ಬೆಂಚ್‌ಮೇಲೆ ಕೂರಿಸಿ ಬರೆಸತೊಡಗಿದೆ. ಆ ಸಮಯದಲ್ಲಿ ಏನೊಂದು ಮಾತನಾಡದೇ ಸುಮ್ಮನೆ ಬರೆದುಕೊಂಡನು. ತರಗತಿಯೆಲ್ಲಾ ಮುಗಿದ ಮೇಲೆ ಅವನನ್ನು ಕರೆದು, ‘ಒಳ್ಳೆ ಪ್ರತಿಭೆ ಇದೆ ಅದನ್ನು ಎಲ್ಲೆಲ್ಲೋ ಬೇಡದೇ ಇರೋ ಕಡೆ ಉಪಯೋಗಿಸೋದಕ್ಕಿಂತ ಒಳ್ಳೆ ಕಡೆಯಲ್ಲಿ ಬಳಸು, ಹಾಳೆಯಲ್ಲೋ, ಪುಸ್ತಕದಲ್ಲೋ ಬರೆ ಬೇಕಾದರೆ ಅದನ್ನು ನೋಟಿಸ್‌ಬೋರ್ಡ್ಗೆ ಅಥವಾ ಪೇಪರ್‌ಗೆ ಹಾಕಿಸೋಣ, ಅದುಬಿಟ್ಟು ಹೀಗೆ ಬರೆದರೆ ಹೇಗೆ?’ ಎಂದೆ ಏನು ಅರ್ಥವಾಯಿತೋ ‘ಸರಿ ಸರ್’ ಎಂದು ತರಗತಿಗೆ ಹೋದ.
ಇತ್ತೀಚೆಗೆ ೯ನೇ ತರಗತಿಯ ಅದೇ ಕೊಠಡಿಗೆ ಹೋದೆ, ಅದೇ ತರಗತಿ ಆದರೆ ಮಕ್ಕಳು ಮಾತ್ರ ಬೇರೆ. ಒಂದು ಪಾಠದ ಪೂರ್ವ ಪೀಠಿಕೆಗೆ ಸಂಬoಧಿಸಿದoತೆ ಒಂದು ಕಥೆಯನ್ನು ಹೇಳಲು ಪ್ರಾರಂಭಿಸಿದೆ. ಕಥೆ ಎಂದರೆ ಮಕ್ಕಳು ಎಲ್ಲಾ ಪುಸ್ತಕ, ನೋಟ್ಸ್ ತೆಗೆದಿಟ್ಟು, ಬೆಂಚ್‌ಗೆ ಒರಗಿ ಕಥೆ ಕೇಳಲು ಪ್ರಾರಂಭಿಸಿದರು. ಇದರ ಮಧ್ಯೆ ಮಧುಮಿತ ಕಥೆ ಕೇಳುತ್ತ, ನನ್ನನ್ನು ನೋಡುವುದು, ಪುಸ್ತಕದಲ್ಲಿ ಏನೋ ಬರೆಯುವಂತೆ ಮಾಡುವುದನ್ನು ಗಮನಿಸಿದೆ. ದೊಡ್ಡಕಣ್ಣು ಬಿಟ್ಟು ಅವಳನ್ನು ನೋಡುತ್ತ ಪಾಠ ಮಾಡತೊಡಗಿದೆ ಪಕ್ಕದಲ್ಲಿದ್ದ ಕೃತಿ ಅವಳಿಗೆ ತಿವಿದಳು, ಮಧುಮಿತ ಬರವಣಿಗೆಯನ್ನು ನಿಲ್ಲಿಸಿ ಕಥೆ ಕೇಳತೊಡಗಿದಳು. ಅಂತೂಇoತೂ ಕಥೆ ಮುಗಿಯಿತು. ನಾಟಕ ರೂಪದಲ್ಲಿ ಪಾಠ ಇದ್ದುದ್ದರಿಂದ ಓದಲು ಮುಂದಾದ ಮಕ್ಕಳಿಗೆ ಪಾತ್ರವನ್ನು ಹಂಚಿ ಸಂಭಾಷಣೆಯನ್ನು ಹೇಳಲು ತಿಳಿಸಿದೆ.

ಮಕ್ಕಳು ಓದಿ ಮುಗಿಸಿದ ನಂತರ ಎಲ್ಲರೂ ಪಾಠವನ್ನು ಕೇಳಲು ಮುಂದಾದರು. ಓಡಾಡುತ್ತ, ಬೋರ್ಡ್ ಮೇಲೆ ಬರೆಯುತ್ತ, ಪಾಠವನ್ನು ಮಾಡತೊಡಗಿದೆ. ಬಿ.ಜಿ.ಎಲ್ ಸ್ವಾಮಿ ಅವರ ‘ನನ್ನಟೋಪಿ’ ಗದ್ಯ ಸ್ವಲ್ಪ ಹಾಸ್ಯದ ಧಾಟಿಯಲ್ಲಿ ಇರುವುದರಿಂದ ಅದೇ ರೀತಿಯಲ್ಲಿ ಪಾಠ ಮಾಡತೊಡಗಿದೆ. ಅಂತೂಇAತೂ ಪಾಠವೆಲ್ಲ ಮುಗಿಸಿ ನೋಟ್ಸ್ ಬರೆಸುವಾಗ ಓಡಾಡುತ್ತ, ಮಕ್ಕಳು ಕಷ್ಟದ ಪದಗಳು ಎಂದಾಗ ಅದನ್ನು ಬೋರ್ಡ್ ಮೇಲೆ ಬರೆಯುತ್ತ, ಬರೆಸತೊಡಗಿದೆ. ಕೆಲವು ಪದಗಳನ್ನು ಹೇಳಿದಾಗ ನಮನಪೂಜಾರ್ ನನ್ನ ಮುಖ ನೋಡುತ್ತಿದ್ದಳು. ಆಗ ಅರ್ಥವಾಗುತ್ತಿತ್ತು ‘ಇವಳಿಗೆ ಈ ಪದ ಬರೆಯಲು ಬರುತ್ತಿಲ್ಲ, ಅದನ್ನು ಬೋರ್ಡ್ ಮೇಲೆ ಬರೆಯಬೇಕಿದೆ ಎಂದು’. ಪುಸ್ತಕದಲ್ಲಿದ್ದ ವ್ಯಾಕರಣ ಅಂಶಗಳನ್ನು ಗುರುತುಹಾಕಿಸಬೇಕಾದ್ದರಿಂದ ‘ಪುಸ್ತಕವನ್ನು ಗಮನಿಸಿ’ ಎಂದು ಮಧುಮಿತಳ ಪುಸ್ತಕವನ್ನು ತೆಗೆದುಕೊಳ್ಳಲು ಮುಂದಾದೆ. ಅದೇನೋ ಶಾಕ್ ಬಡಿದವಳಂತೆ ‘ಸರ್ ಈ ಪುಸ್ತಕ ಬೇಡ’ ಎಂದು ಪಕ್ಕದವಳ ಪುಸ್ತಕವನ್ನು ಕೊಟ್ಟಳು. ಇದೇನು ಹೀಗಿದೆ ವರ್ತನೆ? ಎಂದೆನಿಸಿತು. ‘ನಿನ್ನ ಪುಸ್ತಕಕ್ಕೆ ಏನಾಗಿದೆ?’ ಎಂದೆ ‘ಏನೂ ಆಗಿಲ್ಲ ಆ ಪುಸ್ತಕ ನೋಡಿ ಬರೆಸಿ ಸರ್, ನಾನು ಆಮೇಲೆ ನನ್ನ ಪುಸ್ತಕ ಕೊಡುತ್ತೇನೆ’ ಎಂದಳು. ಸರಿ ಎಂದು ಉತ್ತರವನ್ನೆಲ್ಲ ಪುಸ್ತಕದಲ್ಲಿ ಬರೆಯಲು ತಿಳಿಸಿ ಇವಳೆಡೆಗೆ ನೋಡಿದೆ. ‘ಸರ್ ನೀವು ಬಯ್ಯಲ್ಲ, ಹೊಡೆಯಲ್ಲ ಅಂದರೆ ಹೇಳ್ತಿನಿ’ ಅಂದಳು.’ ಸುಮ್ಮಸುಮ್ಮನೆ ನಾನು ಯಾಕೆ ನಿನಗೆ ಬೈಯೋದು, ಹೊಡೆಯೋದು ಮಾಡಲಿ?’ ಹೇಳು ಅಂದೆ. ‘ಅದು ಹಾಗಲ್ಲ ಸರ್, ನೀವು ಬೈಯಲ್ಲ ಹೊಡೆಯಲ್ಲ ಅಂತ ಹೇಳಿದರೆ ಮಾತ್ರ ಏನು ಅಂತ ಹೇಳ್ತಿನಿ, ಪುಸ್ತಕವನ್ನೂ ಕೊಡ್ತಿನಿ’ ಅಂದಳು. ಇವಳ ಪಕ್ಕದಲ್ಲಿ ಕುಳಿತಿದ್ದ ಗೆಳತಿಯರು ಮುಸಿಮುಸಿ ನಗತೊಡಗಿದರು. ಇವಳಿಗೋ ಏನೋ ಅಂಜಿಕೆ ಬೇರೆ, ‘ಸರಿ ಬೈಯಲ್ಲ-ಹೊಡೆಯಲ್ಲ ಏನು ಅಂತ ಹೇಳು’ ಅಂದೆ ‘ಅದೂ… ಅದೂ…’ ಎಂದು ರಾಗ ತೆಗೆದಳು. ‘ಈಗ ಹೇಳದೇ ಹೋದರೆ ನಿಜವಾಗಿಯೂ ಎರಡು ಬೀಳ್ತವೆ’ ಎಂದೆ, ‘ಸರ್ ನೀವು ಹೊಡೆಯಲ್ಲ ಅಂದಿದಿರಿ’ ಎಂದು ಮಾತು ಮುಂದುವರೆಸುತ್ತ, ‘ನಾನು… ಈ ಪುಸ್ತಕದಲ್ಲಿ, ಅವತ್ತು ನೀವು ಕಥೆ ಹೇಳಬೇಕಾದರೆ… ನಿಂತಿದ್ರಲ್ಲ ಹಾಗೇಯೇ… ನಿಮ್ಮ ಚಿತ್ರ ಬರೀತಾ ಇದ್ದೆ, ನೀವು ದೊಡ್ಡದಾಗಿ ಕಣ್ಣುಬಿಟ್ರಿ ನಾನು ಹೆದರಿಕೊಂಡು ಸುಮ್ಮನಾದೆ ಬರೀ ಗೆರೆ ಎಳೆದಿದ್ದೆ ಮನೆಗೆ ಹೋಗಿ ಅವತ್ತು ಪಾಠ ಮಾಡುವಾಗ ಹೇಗಿದ್ರೋ ಹಾಗೇ ನಿಮ್ಮ ಚಿತ್ರವನ್ನು ಇದೇ ಪುಸ್ತಕದಲ್ಲಿ ಬರೆದಿದ್ದೆ ಹಾಗಾಗಿ ನಿಮಗೆ ಕೊಡಲಿಲ್ಲ’ ಎಂದು ಅಂಜಿಕೆಯಿiದ ಹೇಳಿದಳು.

‘ಅಲ್ಲ ಪಾಠ ಕೇಳೋದು ಬಿಟ್ಟು ಇದನ್ನೆಲ್ಲಾ ಮಾಡ್ತಾ ಇದ್ಯಾ?’ ಎಂದರೆ ‘ಪಾಠ ಮಾಡುವಾಗ ಅಲ್ಲ ಸರ್, ಕಥೆ ಹೇಳ್ತಾ ಇದ್ರಲ್ಲ ಅವಾಗ ಬರೆಯೋಕೆ ಮುಂದಾಗಿದ್ದು, ಪಾಠ ಮಾಡುವಾಗ ಹೀಗೆ ಮಾಡಿಲ್ಲ, ಮಾಡೋದು ಇಲ್ಲ’ ಎಂದಳು. ಪುಸ್ತಕ ತೆಗೆದುಕೊಂಡು ನೋಡಿದರೆ ಪರವಾಗಿಲ್ಲ ನಾನೇ ಎಂದು ಗೊತ್ತಾಗುತ್ತದೆ ಎನಿಸಿತು. ಆಗ ಇದೇ ತರಗತಿಯಲ್ಲಿ 2ವರ್ಷದ ಹಿಂದೆ ಶ್ರೀರಾಮ್‌ಸಾಚಿತ್ ಎನ್ನುವ ವಿದ್ಯಾರ್ಥಿಯನ್ನ ನೆಲದಲ್ಲಿ ಕೂರಿಸಿದ್ದಾಗ ಚಿತ್ರ ಬರೆದಿದ್ದ ಎಂದಾಗ ಈಕೆಗೆ ಸ್ವಲ್ಪ ಧೈರ್ಯ ಬಂದು ‘ನೋಡಿ ಸರ್ ಈ ಕೊಠಡಿಯಲ್ಲಿ ತುಂಬಾ ಪ್ರತಿಭೆಗಳು ಸಿಗತ್ತೆ’ ಎಂದು ನಗುತ್ತ ಹೇಳಿದಳು.
ಮೊದಲೇ ಬೈಯೋದು, ಹೊಡೆಯೋದು ಮಾಡಲ್ಲ ಅಂತ ಹೇಳಿದ್ದೆ. ‘ಮೋ… ಇದು ನಾನು ಅಂತ ನನಗೆ ಗೊತ್ತಾಗತ್ತೆ ಅಷ್ಟೇ’ ಎಂದೆ ಪಕ್ಕದ ಮಕ್ಕಳು, ‘ನಾವು ಅದನ್ನೇ ಹೇಳಿದ್ವಿ ಸರ್, ಸ್ವಲ್ಪ ಚೆನಾಗಿ ಬರೀ ನಮ್ಮ ಸರ್ ಅಂತ ಗೊತ್ತಾಗೋ ಹಾಗೇ’ ಅಂದರು. ಮರುದಿನಕ್ಕೆ ಅದನ್ನು ಚೆಂದ ಮಾಡಿ ಬರೆದುಕೊಂಡು ಬಂದಿದ್ದಳು.
ಈ ತರಗತಿಯಲ್ಲಿ ಪಾಠ ಮಾಡುವಾಗ ಈ ರೀತಿಯ ವಿಶೇಷ ಪ್ರತಿಭೆಗಳು ಇರುತ್ತವೆ ಎಂಬುದೇ ತಿಳಿಯುವುದಿಲ್ಲ. ಆದರೆ ಅದನ್ನು ಈ ರೀತಿ ಮಾಡುವ ಬದಲು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಿ, ಚಿತ್ರಕಲೆಯ ಬಗ್ಗೆ ಗಮನಕೊಟ್ಟಲ್ಲಿ ಈ ಪ್ರತಿಭೆಗಳನ್ನು ಇನ್ನಷ್ಟು ಬೆಳಗಬಹುದು. ಆದರೂ, ಏನು ಹೇಳಬೇಕು ಅಂತಾನೇ ಗೊತ್ತಾಗಲ್ಲ. ಇಬ್ಬರೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿ ಅಭ್ಯಾಸ ಮಾಡುತ್ತಿದ್ದಾರೆ. ಇದನ್ನು ಹಾಗೆಯೇ ಮುಂದುವರೆಸಿಕೊoಡು ಹೋದಲ್ಲಿ ಒಳ್ಳೆಯದಾಗಬಹುದು ಎನಿಸುತ್ತದೆ. ತರಗತಿಯಲ್ಲಿ ಕಿರಿಕಿರಿ ಮಾಡುವ ಮಕ್ಕಳು ಕಂಡಾಗ ಇವರಿಬ್ಬರ ನೆನಪಾಗತ್ತೆ. ಹಾಗಂತ ಎಲ್ಲರೂ ಹೀಗೆ ಇರ್ತಾರೆ ಅಂತಾನೂ ಇಲ್ಲವಲ್ಲ ಅಂತ ಸುಮ್ಮನಾಗುತ್ತೇನೆ. ‘ಪಾಠ ಮಾಡುವಾಗ ಅರಳಿದ ಪ್ರತಿಭೆಗಳು’ ಅಂತ ಆಗಾಗ ಅನ್ನಿಸ್ತಾ ಇರ್ತದೆ. ಹಾಗಂತ ಎಲ್ಲಾ ಮಕ್ಕಳು ಪಾಠ ಮಾಡುವಾಗ ಈ ರೀತಿಯಲ್ಲಿ ಮಾಡೋಕೆ ಹೋಗಬೇಡಿ.

Leave a Reply

Your email address will not be published. Required fields are marked *

Scan the code