ರಾಜ್ಯದ ಯಕ್ಷ ಕಲೆಗಿದೆ ವಿಶೇಷ ಮಹತ್ವ
(CHIKKAMAGALURU ): ರಾಜ್ಯದ ವಿಶೇಷ ಕಲೆಯಾದ ಯಕ್ಷಗಾನಕ್ಕೆ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವಿದೆ ಎಂದು ದುರ್ಗಾದೇವಿ ನವರಾತ್ರಿ ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯು ಶುಕ್ರವಾರ ಆಯೋಜಿಸಿದ್ದ ಯಕ್ಷ ಹಾಸ್ಯ ವೈಭವ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡಿದರು.
ದೇಶದ ಸಂಸ್ಕೃತಿಯಲ್ಲಿ ಯಕ್ಷಗಾನ ಕಲೆಯು ವಿಶಿಷ್ಟವಾಗಿದ್ದು, ಇದರಲ್ಲಿ ಭಕ್ತಿ ಭಾವ, ಹಾಸ್ಯ ಸೇರಿದಂತೆ ಹಲವು ಪ್ರಾಕಾರಗಳನ್ನು ವಿಶೇಷವಾಗಿ ಹೊಂದಿ ನೋಡುಗರನ್ನು ಹಿಡಿದಿಟ್ಟುಕೊಂಡಿದೆ. ಯಕ್ಷಗಾನದಲ್ಲಿ ಪ್ರಮುಖವಾಗಿ ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳು ನೋಡುಗರ ಗಮನಸೆಳೆಯುತ್ತದೆ.
ಕರ್ನಾಟಕದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದ್ದು, ಇದರ ನೋಡುಗರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಈ ಕಲೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದರು.
ಖ್ಯಾತ ಭಾಗವತ ಧೀರಜ್ ರೈ ಸಂಪಾಜೆ ನೇತೃತ್ವದಲ್ಲಿ ತುಳು ಹಾಸ್ಯ ಕಲಾವಿದರಿಂದ ವಿವಿಧ ಯಕ್ಷ ಹಾಸ್ಯ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಸಹ ಖಜಾಂಚಿ ಚೈತನ್ಯ ವೆಂಕಿ, ಸದಸ್ಯರಾದ ದೇವದಾಸ್, ಮನುಕುಮಾರ್, ದಿನೇಶ್ ತುಪ್ಪೂರು, ಎಂ.ನಾರಾಯಣ, ಗಿರೀಶ್ ಎಂಟಿಆರ್, ಬಿ.ಜಗದೀಶ್ಚಂದ್ರ, ಎ.ಸಿ.ಕೃಷ್ಣಮೂರ್ತಿ ಮತ್ತಿತರರು ಇದ್ದರು.
ನಾಳೆ ವೈಷ್ಣವಿರೂಪಿಣಿ ಪೂಜಾ ಪಾರಾಯಣ
ಬಾಳೆಹೊನ್ನೂರು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ನವರಾತ್ರಿ ಮಹೋತ್ಸವದ ಅಂಗವಾಗಿ ಅ.6 ಭಾನುವಾರ ಬೆಳಿಗ್ಗೆ 8.30ರಿಂದ 11.30 ರವರೆಗೆ ಗರುಡವಾಹಿನಿ, ವೈಷ್ಣವಿ ರೂಪಿಣಿ ಪೂಜಾ ಪಾರಾಯಣ ನಡೆಯಲಿದೆ.
ಸಂಜೆ 6 ರಿಂದ 7.45ರವರೆಗೆ ಭಕ್ತಾಧಿಗಳಿಂದ ಪೂಜಾ ಸೇವೆ, ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ 8ರಿಂದ ವಿದುಷಿ ಜ್ಞಾನ ಐತಾಳ್ ನೇತೃತ್ವದ ಹೆಜ್ಜೆನಾದ ತಂಡದಿಂದ ಗಾನ ನಾಟ್ಯ ವೈಭವ ಕಾರ್ಯಕ್ರಮ ನಡೆಯಲಿದೆ.