ಯರಗೋಳ್ ಜಲಾಶಯ ಕಾಮಗಾರಿ ಸ್ಥಗಿತಗೊಳಿಸಿದ್ದು ಕಾಂಗ್ರೆಸ್: ಎಸ್ ಮುನಿಸ್ವಾಮಿ
(KOLARA): ಬಂಗಾರಪೇಟೆ : ಕಾಂಗ್ರೆಸ್ ಸರ್ಕಾರ ಅಧಿಕಾರವಧಿಯಲ್ಲಿದ್ದಾಗ ಆಗಿನ ಮಂತ್ರಿಯಾಗಿದ್ದ ವಿನಯ್ ಕುಮಾರ್ ಸ್ವರ್ಕೆ ರವರು ಯರಗೊಳ್ ಜಲಾಶಯದ ಯೋಜನೆ ಅವೈಜ್ಞಾನಿಕ ವ್ಯರ್ಥ ಯೋಜನೆ ಎಂದು ಸ್ಥಗಿತಗೊಳಿಸಿದರು ಹಾಗೂ ತಮಿಳುನಾಡು ಸರ್ಕಾರದ ಮೂಲಕ ಪರೋಕ್ಷವಾಗಿ ದೂರು ದಾಖಲಿಸುವಂತೆ ಮಾಡಿ ಸಂಪೂರ್ಣ ಕಾಮಗಾರಿಯನ್ನು ನಿರ್ಲಕ್ಷಿಸಿದ್ದರು, ಎಂದು ಸಂಸದ ಎಸ್ ಮೂನಿಸ್ವಾಮಿ ಗಂಭೀರ ಆರೋಪ ಮಾಡಿದರು.
ತಾಲೂಕಿನ ಬಲಮಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗೋಳ್ ಜಲಾಶಯದ ಬಳಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್, ಜಲಜೀವನ್ ಮಿಷನ್, ನಗರೋತ್ಥಾನ, ಮತ್ತು 14 ಹಾಗೂ 15ನೇ ಹಣಕಾಸು ಯೋಜನೆಯ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ 2197.72 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಮಾಡಿ ರಾಜ್ಯ ಸರ್ಕಾರದ ಸಾಧನೆ ಎಂದು ಪ್ರತಿಬಿಂಬಿಸಲು ಹೊರಟಿರುವುದು ಹಾಸ್ಯಾಸ್ಪದ ಎಂದರು.
ಯರಗೋಳ್ ಡ್ಯಾಮ್ ನಿರ್ಮಾಣಕ್ಕೆ ಶಿಕ್ಷಕ ಹಾಗೂ ಮಾಧ್ಯಮದವರ ಕೊಡುಗೆ ಅಪಾರ:
ಮಾರ್ಕಂಡಯ್ಯ ಡ್ಯಾಮ್ ನಿಂದ ತಮಿಳುನಾಡಿಗೆ ಹರಿದು ಹೋಗುತ್ತಿದ್ದ ನೀರಿಗೆ ಯರಗೋಳ್ ಗ್ರಾಮದ ಬಳಿ ಜಲಾಶಯ ನಿರ್ಮಿಸಿದರೆ ಮೂರು ತಾಲೂಕುಗಳಿಗೆ ನೀರು ಸರಬರಾಜು ಮಾಡಬಹುದು ಎಂದು ಚಿಂತಿಸಿದ ಶಿಕ್ಷಕ ಚಂದ್ರಯ್ಯನವರು, ಮಾಧ್ಯಮದವರ ಬಳಿ ತಿಳಿಸಿದಾಗ ಪತ್ರಕರ್ತರಾದ ಗೋಪಿನಾಥ್, ಪ್ರಹಲ್ಲಾದ್ ರಾವ್ ಒಳಗೊಂಡಂತೆ ಎಲ್ಲಾ ಮಾಧ್ಯಮದವರು ವರದಿಯನ್ನು ಬಿತ್ತರಿಸಿದ ಪರಿಣಾಮ ಆಗಿನ ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರದ ಗಮನವನ್ನು ಸೆಳೆದರು, ಇದನ್ನು ಮನಗಂಡ ಆಗಿನ ಶಾಸಕರಾಗಿದ್ದ ಬಿ.ಪಿ .ವೆಂಕಟಮುನಿಯಪ್ಪ ,ಕೃಷ್ಣಯ್ಯ ಶೆಟ್ಟಿ, ಕೃಷಿ ಸಚಿವರಾಗಿದ್ದ ಶ್ರೀನಿವಾಸ ಗೌಡ, ಕೆಜಿಎಫ್ ಶಾಸಕ ರಾಜೇಂದ್ರ ಅವರು ತಲಾ ಎರಡು ಲಕ್ಷ ರೂಗಳಂತೆ ಹಣವನ್ನು ಕ್ರೂಢೀಕರಿಸಿ ತಮ್ಮ ಸ್ವಂತ ಹಣದಲ್ಲಿ ಕಾರ್ಯಪಾಲಕ ಅಭಿಯಂತರಾಗಿದ್ದ ಪಾಪೇಗೌಡರ ಮುಖಾಂತರ ಸ್ಥಳ ವೀಕ್ಷಣೆ ಮತ್ತು ಸರ್ವೆ ಕಾರ್ಯವನ್ನು ಆರಂಭಿಸಿದರು, ತದನಂತರ ವರದಿಯನ್ನು ಮುಖ್ಯಮಂತ್ರಿಗಳಾಗಿದ್ದ ಎಚ್ ಡಿ ಕುಮಾರಸ್ವಾಮಿ ಅವರಿಗೆ ತಲುಪಿಸಿದರು, ಇದನ್ನು ಆಧರಿಸಿದ ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಿಎಸ್ ಯಡಿಯೂರಪ್ಪನವರು ಮೊದಲನೇ ಬಾರಿಗೆ 135 ಕೋಟಿ ರೂಗಳ ವೆಚ್ಚದ ಕಾಮಗಾರಿಗೆ ಅನುಮೋದನೆಯನ್ನು ನೀಡಿ ಮುಂಗಡವಾಗಿ 50 ಕೋಟಿ ರೂಗಳನ್ನು ಬಿಡುಗಡೆ ಮಾಡಿದರು.
ತದನಂತರ ಎರಡನೇ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್
ಯಡಿಯೂರಪ್ಪನವರು ಹಾಗೂ ಆಗಿನ ಒಳಚರಂಡಿ ಮಂಡಳಿ ಅಧ್ಯಕ್ಷರಾಗಿದ್ದ ವರ್ತೂರು ಪ್ರಕಾಶ್ ರವರು ಒಟ್ಟಾಗಿ 65 ಕೋಟಿ ರೂಗಳನ್ನು ಬಿಡುಗಡೆ ಮಾಡಿ ಮಾಲೂರು, ಬಂಗಾರಪೇಟೆ, ಕೋಲಾರ ತಾಲೂಕುಗಳಿಗೆ ಪೈಪ್ ಲೈನ್ ಕಾಮಗಾರಿಗೆ ಪುನರ್ಜೀವನ ನೀಡಿದರು.
ಶಂಕುಸ್ಥಾಪನೆಯ ಮೂಲಕ ಜಿಲ್ಲೆಯ ಜನತೆಗೆ ಕಣ್ಣೊರೆಸುವ ತಂತ್ರ.
ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ ಎಂದು ರಾಜಿನಾಮೆ ಕೊಡಲು ಸಿದ್ದರಾಗಿದ್ದರು. ತದನಂತರ ಶಾಸಕರನ್ನು ಸಮಾಧಾನ ಮಾಡಲು ಡಿನ್ನರ್ ಪಾರ್ಟಿಗಳನ್ನು ಆಯೋಜನೆ ಮಾಡಿ ಸಮಾಧಾನ ಮಾಡಲಾಗಿದೆ, ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಯಾವುದೇ ಅನುದಾನವನ್ನು ನೀಡದೆ ಕೇಂದ್ರ ಸರ್ಕಾರದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿ ತಮ್ಮ ಸಾಧನೆ ಎಂದು ಪ್ರತಿಬಿಂಬಿಸಲು ಹೊರಟಿದ್ದಾರೆ, ಆ ಮೂಲಕ ಜಿಲ್ಲೆಯ ಜನತೆಗೆ ಕಣ್ಣೊರೆಸುವ ತಂತ್ರಕ್ಕೆ ಮುಂದಾಗಿದ್ದಾರೆ.
ಶಾಸಕರ ನಿರ್ದೇಶನದಂತೆ ಮುಖ್ಯಮಂತ್ರಿ ಭಾಷಣ:
ಮಾನ್ಯ ಮುಖ್ಯಮಂತ್ರಿಗಳಿಗೆ ಕಾಮಗಾರಿಗಳ ಬಗ್ಗೆ ಸಮಗ್ರ ಮಾಹಿತಿ ಕೊರತೆಯಿಂದಾಗಿ ಕೆಜಿಎಫ್ ನ ಶಾಸಕಿ ರೂಪಕಲಾ ಶಶಿಧರ್ ಹಾಗೂ ಸ್ಥಳೀಯ ಶಾಸಕ ಎಸ್ಎನ್ ನಾರಾಯಣಸ್ವಾಮಿಯವರು ಪದೇ ಪದೇ ಮುಖ್ಯಮಂತ್ರಿಗಳ ಭಾಷಣಕ್ಕೆ ನಿರ್ದೇಶನಗಳನ್ನು ನೀಡುತ್ತಿದ್ದರು ಅವರ ಅಣತಿಯಂತೆ ಭಾಷಣ ಮಾಡಿದ ಮುಖ್ಯಮಂತ್ರಿಗಳು ವೇದಿಕೆಯನ್ನು ಡ್ರಾಮಾ ಕಂಪನಿಯನ್ನಾಗಿಸಿದರು, ಸರ್ಕಾರದ ಬರೀ ಐದು ಯೋಜನೆಗಳನ್ನು ಈಡೇರಿಸಲು ಹಣವಿಲ್ಲದೆ ಪಡೆದಾಡುತ್ತಿದೆ ಎಂದು ಗುಡುಗಿದರು.
ಬಹಿರಂಗ ಚರ್ಚೆಗೆ ಆಹ್ವಾನ:
ಉದ್ದೇಶಪೂರ್ವಕವಾಗಿ ಜಿಲ್ಲಾಡಳಿತ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಮಾತ್ರ ಭಾಷಣ ಮಾಡಲು ಅವಕಾಶವನ್ನು ನೀಡಿ ನಮಗೆ ಅವಕಾಶವನ್ನು ನೀಡಲಿಲ್ಲ ಆ ಮೂಲಕ ಶಿಷ್ಟಾಚಾರ ಉಲ್ಲಂಗಿಸಿದ್ದಾರೆ,
ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಣಕಾಸಿನ ಸಮಗ್ರ ಮಾಹಿತಿಗಳನ್ನು ಒಳಗೊಂಡ ದಾಖಲೆಗಳು ನನ್ನ ಬಳಿಯಲ್ಲಿದೆ ಜಿಲ್ಲೆಗೆ ರಾಜ್ಯ ಸರ್ಕಾರದ ಸಾಧನೆ ಶೂನ್ಯವಾಗಿದ್ದು ಮಾಧ್ಯಮಗಳ ಮುಂದೆ ಬಹಿರಂಗದ ಚರ್ಚೆಗೆ ದಾಖಲೆ ಸಮೇತ ಸಿದ್ಧನಿದ್ದೇನೆ ಎಂದು ಸವಾಲ್ ಹಾಕಿದರು.
ಸಂದರ್ಭದಲ್ಲಿ ಸಂಸದ ಎಸ್ ಮುನಿಸ್ವಾಮಿ ,ಪುರಸಭಾ ಸದಸ್ಯ ಕಪಾಲಿ ಶಂಕರ್, ಜಿಲ್ಲಾ ಮುಖಂಡ ಅಪ್ಪಿ ನಾರಾಯಣಸ್ವಾಮಿ, ಇತರರು ಉಪಸ್ಥಿತರಿದ್ದರು.
ವರದಿ ವಿಷ್ಣು ಕೋಲಾರ