‘ಇವತ್ತು ಯೋಗ ಮಾಡೋಕೆ ಬಂದಿದ್ವಿ ಅನ್ನೋದಕ್ಕೆ ಫೋಟೋ ತೆಗೆದುಕೊಳ್ಳೋಣ’
‘ಇವತ್ತು ಯೋಗ ಮಾಡೋಕೆ ಬಂದಿದ್ವಿ ಅನ್ನೋದಕ್ಕೆ ಫೋಟೋ ತೆಗೆದುಕೊಳ್ಳೋಣ’
ಅದೊಂದು ದಿನ ಶಂಕರ ಟಿ.ವಿ ಮತ್ತು ಶಿಕ್ಷಣ ಇಲಾಖೆಯ ಜೊತೆಗೆ ವಿವಿಧ ಯೋಗ ಕೇಂದ್ರಗಳ ಸಹಯೋಗದಲ್ಲಿ ಸೂರ್ಯ ನಮಸ್ಕಾರ ಮತ್ತು ವಿವಿಧ ಯೋಗಭಂಗಿಗಳನ್ನು ಸಾಮೂಹಿಕವಾಗಿ ಆಯೋಜಿಸಲಾಗಿತ್ತು. ಶಾಲೆ, ಕಾಲೇಜ್ನ ಮತ್ತು ಸರ್ಕಾರದ ವಿವಿಧ ಇಲಾಖೆಗಳು ಸಹಯೋಗವನ್ನು ನೀಡುತ್ತಿವೆ ಎಂದು ತಿಳಿಸಿದ್ದರು.
ಬೆಳಗ್ಗೆ 6.೦೦ಕ್ಕೆ ನಗರದ ನೆಹರೂ ಮೈದಾನದಲ್ಲಿ ಎಲ್ಲರೂ ಇರಬೇಕು ಎಂದು ತಿಳಿಸಿದ್ದರು. ಶಾಲೆಯಲ್ಲಿ ಯೋಗದಲ್ಲಿ ಆಸಕ್ತಿ ಇದ್ದ ಮಕ್ಕಳು ಬರುವುದಾಗಿ ತಿಳಿಸಿದ್ದರು. ಇಲಾಖೆಯಿಂದ ಮತ್ತೊಂದು ಸುತ್ತೋಲೆ ಬಂದಿತು ಅದೇನೆಂದರೆ, ಒಂದು ಶಾಲೆಯಿಂದ 100 ವಿದ್ಯಾರ್ಥಿಗಳಾದರೂ ಭಾಗವಹಿಸಲೇ ಬೇಕು ಜೊತೆಗೆ ‘ಭಾಗವಹಿಸುವ ಎಲ್ಲರಿಗೂ ತಿಂಡಿಯ ವ್ಯವಸ್ಥೆ ಇದೆ’ ಎಂದು, ಮರುದಿನಕ್ಕೆ ‘ಬರುತ್ತೇನೆ’ ಎನ್ನುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿತು. ಇದರ ನಡುವೆ ಗೊಂದಲ ಬೇಡವೆಂದು 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು, ಜೊತೆಗೆ ಪ್ರಾಥಮಿಕ ಶಾಲೆಯ ಮಕ್ಕಳು ಆಸಕ್ತಿಯಿದ್ದ ಪ್ರೌಢಶಾಲೆಯ ಮಕ್ಕಳು ಬರಲು ಸಿದ್ದರಾದರು.
ದೈಹಿಕ ಶಿಕ್ಷಕರುಗಳ ಕಡೆಯಿಂದ ಮಕ್ಕಳಿಗೆ ಸಲಹೆ ಸೂಚನೆಗಳು ಸಿಕ್ಕಿತು. ಎಲ್ಲರೂ ಯೋಗಕ್ಕೆ ಅನುಕೂಲಕರವಾದ ವಸ್ತ್ರಧರಿಸಿ ಬರಬೇಕು, ಸಾಧ್ಯವಾದರೆ ಶಾಲೆಯ ಸಮವಸ್ತ್ರದಲ್ಲಿರುವ ಟೀ-ಷರ್ಟ್ ಅನ್ನು ಧರಿಸಿದ್ದರೆ ಇನ್ನೂ ಒಳ್ಳೆಯದು ಎಂದರು. ಭುವನ್, ‘ಸರ್ ನಿಜವಾಗಿಯೂ ತಿಂಡಿ ಕೊಡುತ್ತಾರೆ ತಾನೇ?’ ಎಂದನು. ‘ಕೊಟ್ಟೇ ಕೊಡುತ್ತಾರೆ ಇಲ್ಲದೇ ಹೋದರೆ ನಾನೇ ಕೊಡಿಸ್ತೇನೆ ಬಾ’ ಎಂದು ದೈಹಿಕ ಶಿಕ್ಷಕರಾದ ಪ್ರಶಾಂತ್ಸರ್ ಹೇಳಿದರು. ಎಲ್ಲರೂ ಹೋ… ಎಂದು ಕೂಗಿದರು. ವೀಣಾ ಮೇಡಂ, ‘ನಿಜವಾಗಿಯೂ ಕೊಡಿಸ್ತಿರಾ? ಸರ್’ ಎಂದರು. ‘ಹೇಗಿದ್ದರೂ ಇಲಾಖೆಯಿಂದ ಹೇಳಿದಾರೆ ವ್ಯವಸ್ಥೆ ಮಾಡಿರ್ತಾರೆ ಅನುಮಾನವೇ ಬೇಡ’ ಎಂದರು. ಮಕ್ಕಳು ಬೆಳಗ್ಗೆ ಬೇಗ ಬರಬೇಕಿರುವುದರಿಂದ ‘ಬಸ್’ ವ್ಯವಸ್ಥೆ ಇರಲಿದೆ ಹಾಗಾಗಿ ಎಷ್ಟೊತ್ತಿಗೆ ಬಸ್ ಬರಲಿದೆ ಎಂದು ಕೇಳಿಕೊಂಡು ಹೊರಡಿ ಎಂದು ಮಾಹಿತಿಯನ್ನು ಎಲ್ಲಾ ಮಕ್ಕಳಿಗೆ ನೀಡಿ ಕಳಿಸಿದರು.
ಬೆಳಗ್ಗೆ ನೆಹರೂ ಮೈದಾನದ ಸಮೀಪದಲ್ಲಿ ಎಲ್ಲೂ ವಾಹನ ನಿಲ್ಲಿಸಲು ಸ್ಥಳವೇ ಇರಲಿಲ್ಲ ಅಷ್ಟೊಂದು ಶಾಲಾ/ಕಾಲೇಜ್ ವಾಹನಗಳಿದ್ದವು. ಸ್ವಲ್ಪದೂರದಲ್ಲಿಯೇ ಗಾಡಿಯನ್ನು ನಿಲ್ಲಿಸಿ ನಡೆದುಕೊಂಡು ಹೋಗುವಾಗ ನಮ್ಮ ಶಾಲೆಯ ಕೆಲವು ಮಕ್ಕಳು ಸಿಕ್ಕರು ಎಲ್ಲರೂ ಒಳಾಂಗಣ ಕ್ರೀಡಾಂಗಣದ ಮೂಲಕವೇ ಪ್ರವೇಶಿಸಬೇಕಿತ್ತು. ಯಾವ ಶಾಲೆ? ಎಷ್ಟು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ? ಎಂಬ ಮಾಹಿತಿಯನ್ನು ನೀಡಬೇಕಿತ್ತು. ಅನೇಕ ಸ್ವಯಂಸೇವಕರು ಅಲ್ಲಿ ಅದಕ್ಕಾಗಿ ಇದ್ದರು. ಮೊಬೈಲ್ ಸಮಸ್ಯೆಗಳು ಆಗುತ್ತಿದ್ದುದರಿಂದ ಬಹಳಷ್ಟು ಶಾಲಾ ಮಕ್ಕಳನ್ನು ರಿಜಿಸ್ಟರ್ ಆದಮೇಲೆಯೇ ಒಳಗೆ ಬಿಡುವುದು ಎಂದು ತಿಳಿಸುತ್ತಿದ್ದರು. ಅಷ್ಟರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ಸರ್ ಇದ್ದರು. ಅವರ ಬಳಿ ವಿಷಯ ತಿಳಿಸಿದಾಗ ಮಕ್ಕಳನ್ನು ಒಳಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದರು. ಅವರ ಮೊಬೈಲ್ ನಲ್ಲಿಯೇ ನಮ್ಮ ಮಾಹಿತಿಯನ್ನು ತೆಗೆದುಕೊಂಡು ಸಲ್ಲಿಸಿದರು. ಅವರಿಗೊಂದು ಧನ್ಯವಾದಗಳನ್ನು ತಿಳಿಸಿ ಒಳಗೆ ಹೋದರೆ ಮಂಜು ಕವಿದಿದೆ. ದೂರದಲ್ಲಿವವರು ಕಾಣದ ಹಾಗೇ, ಮುಂದೆಮುಂದೆ ಹೋದರೆ ‘ಜನಜಾತ್ರೆ’ ಸಾವಿರಾರು ಜನರು, ವಿದ್ಯಾರ್ಥಿಗಳು, ಯೋಗಕೇಂದ್ರದವರು, ಸಾರ್ವಜನಿಕರು ಅದಾಗಲೇ ಸೇರಿದ್ದರು. ನಮ್ಮ ಶಾಲೆಯ ಮಕ್ಕಳೆಲ್ಲ ಒಂದೆಡೆ ಯೋಗಕ್ಕೆ ದೂರದೂರದಲ್ಲಿಯೇ ನಿಂತರು. ಕೆಲವರು ‘ಯೋಗಮ್ಯಾಟ್’ ತಂದಿದ್ದರು ಇನ್ನೂ ಕೆಲವರು ಏನಾದರೂ ಸರಿ ಎಂದು ತಾವು ತಂದಿದ್ದನ್ನೇ ಹಾಸಿಕೊಂಡು ಅದರ ಮೇಲೆ ನಿಂತು ಯೋಗಕ್ಕೆ ಸಿದ್ಧರಾದರು. ‘ಸಿಂಥೆಟಿಕ್ ಟ್ರ್ಯಾಕ್’ ಮೇಲೆ ಇದ್ದುದ್ದರಿಂದ ಕೆಲವರು ಅದರ ಮೇಲೆಯೇ ನಿಂತರು ಒಂದಿಷ್ಟು ಸಲಹೆ ಸೂಚನೆಗಳನ್ನು ನೀಡುತ್ತಲೇ ಇದ್ದರು.
ಎಲ್ಲರಿಂದಲೂ ಒಂದಿಷ್ಟು ಯೋಗ ಅಭ್ಯಾಸ ಮಾಡಿಸಿದರು. ತದನಂತರ ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಯೋಗ ಮಾಡಲು ಬಂದರು. ಎಲ್ಲರಿಗೂ ಸೂಚನೆ ಕೊಡುತ್ತ ಯೋಗ ಮಾಡುತ್ತಲೇ ಇದ್ದರು. ತಡವಾಗಿ ಬಂದವರು ಅಲ್ಲಲ್ಲೇ ಸೇರಿಕೊಳ್ಳುತ್ತಾ ಯೋಗ ಮಾಡತೊಡಗಿದರು. ನಮ್ಮ ಹಲವು ಮಕ್ಕಳು ಯೋಗ ತರಗತಿಗೆ ಹೋಗುತ್ತಿದ್ದುದರಿಂದ ಉತ್ತಮವಾಗಿಯೇ ಯೋಗವನ್ನು ಮಾಡಿದರು. ಕೆಲವು ಕಡೆಗಳಲ್ಲಿ ಯೋಗಕೇಂದ್ರದವರಿಗೆ ಎತ್ತರದ ವೇದಿಕೆಯನ್ನು ನಿರ್ಮಿಸಿ ಅವರನ್ನು ನೋಡಿ ಯೋಗ ಮಾಡುವಂತೆ ತಿಳಿಸುತ್ತಿದ್ದರು. ಎಲ್ಲರೂ ನೀಡುತ್ತಿದ್ದ ಮಾರ್ಗದರ್ಶನದಂತೆ ಯೋಗವನ್ನು ಮಾಡಿಯಾಗಿತ್ತು. ನಂತರ ಎಲ್ಲರಿಗೂ ತಿಂಡಿಯ ವ್ಯವಸ್ಥೆ ಇದೆ. ಹಲವಾರು ಕೌಂಟರ್ಗಳಲ್ಲಿ ತಿಂಡಿ ನೀಡಲಾಗುತ್ತಿದೆ ಎಂದು ತಿಳಿಸಿದರು. ನಮ್ಮ ಶಾಲೆಯ ಮಕ್ಕಳೆಲ್ಲರನ್ನು ಒಂದೆಡೆ ಸೇರಿಸಿಕೊಂಡು ಒಂದು ಕೌಂಟರ್ನಲ್ಲಿ ತಿಂಡಿ ತೆಗೆದುಕೊಳ್ಳೋಣ ಎಂದು ಒಂದು ಕಡೆಗೆ ಹೋದೆವು. ಮಾರ್ಗದ ಮಧ್ಯೆ ‘ಇವತ್ತು ಯೋಗ ಮಾಡೋಕೆ ಬಂದಿದ್ವಿ ಅನ್ನೋದಕ್ಕೆ ಫೋಟೋ ತೆಗೆದುಕೊಳ್ಳೋಣ’ ಎಂದು ಪಾವನಿಸಿಂಗ್ ಕೇಳಿದಳು. ಆಗಲಿ ಎಂದು ಫೋಟೋ ತೆಗೆದುಕೊಳ್ಳಲು ಮುಂದಾದೆವು. ಹಿಂದಿ0ದೆ ಹಲವು ಮಕ್ಕಳು ‘ಸರ್ ನಾವು ಪೋಟೋಗೆ ಬರ್ತಿವಿ’ ಎಂದು ಓಡೋಡಿ ಬಂದರು. ಅಷ್ಟರಲ್ಲಿ ದೈಹಿಕಶಿಕ್ಷಕರು ಬಂದರೂ ಎಲ್ಲರೂ ಸೇರಿ ಫೋಟೋ ತೆಗೆದುಕೊಂಡೆವು.
ತಿಂಡಿ ತಿನ್ನಲು ಆಗಲೇ ಪೈಪೋಟಿಗಿಳಿದಿದ್ದ ಹಲವು ಮಕ್ಕಳು, ಸಾರ್ವಜನಿಕರ ಮಧ್ಯೆ ನಾವೆಲ್ಲ ಒಂದು ಕೌಂಟರ್ ಕಡೆಗೆ ಹೊರಟೆವು. ಎಲ್ಲರಿಗೂ ತಿಂಡಿಯನ್ನು ನವ್ಯಶ್ರೀ ಅನ್ನಪೂರ್ಣದ ನಾಗೇಶ್ ರವರ ಕಡೆಯಿಂದ ಸಿದ್ಧವಾಗಿತ್ತು. ಅವರೇ ಬಡಿಸುತ್ತಿದ್ದರು. ನಮ್ಮ ಮಕ್ಕಳು ಅಲ್ಲಿಯೇ ತಿಂಡಿಯನ್ನು ಹಾಕಿಸಿಕೊಂಡರು. ತಿಂಡಿಯನ್ನು ತಿಂದು ಮುಗಿಸುವ ಸಮಯಕ್ಕೆ ಸಂಕ್ರಾತಿಯ ಸಮಯವಾದ್ದರಿಂದ ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಅವರು ‘ಎಳ್ಳುಬೆಲ್ಲ’ವನ್ನು ನೆರದವರಿಗೆಲ್ಲ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಿದ್ದರು. ಕೆಲವರಂತೂ ಮುಗಿಬಿದ್ದು ತೆಗೆದುಕೊಳ್ಳತೊಡಗಿದರು. ಇದರ ಮಧ್ಯೆ ಶ್ರೀವತ್ಸ ಮಜ್ಜಿಗೆ ಪ್ಯಾಕೆಟ್ ತೆಗೆದುಕೊಂಡು ಬಂದ. ನಮಗೂ ನೀಡಿದ ‘ಇಷ್ಟೊಂದು ಮಜ್ಜಿಗೆ ಪ್ಯಾಕೆಟ್ ಎಲ್ಲಿಂದ ತಂದ್ಯೋ?’ ಎಂದರೆ ಇಲ್ಲೇ ನೀಡುತ್ತಿದ್ದಾರೆ ಉಚಿತವಾಗಿ ಎಂದು ಕೆಲವು ಮಕ್ಕಳನ್ನು ಕರೆದುಕೊಂಡು ಹೋದ. ಅಲ್ಲಿಂದ ಒಂದು ದೊಡ್ಡ ಬಾಕ್ಸ್ಅನ್ನೇ ಹೊತ್ತುಕೊಂಡು ಬಂದರು. ಅದರ ತುಂಬಾ ಮಜ್ಜಿಗೆ ಪ್ಯಾಕೇಟ್. ‘ಏನ್ರೋ ಇದು ಹೀಗೆ?’ ಎಂದರೆ, ‘ನಾವು 1೦೦ಕ್ಕಿಂತ ಹೆಚ್ಚು ಶಾಲೆ ಮಕ್ಕಳು ಇದೀವಿ ಎಂದಾಗ ಇಷ್ಟೂ ನಮಗೇ ಕೊಟ್ಟರು’ ಎಂದ ಶ್ರೀವತ್ಸ. ಎಲ್ಲರೂ ಬೇಕಾದಷ್ಟು ತಿಂಡಿ, ನೀರು, ಎಳ್ಳುಬೆಲ್ಲ, ಮಜ್ಜಿಗೆ ಸೇವಿಸಿದ್ದರು. ಯಾವುದೂ ಯಾರಿಗೂ ಕೊರತೆಯೇ ಆಗಲಿಲ್ಲ. ಎಲ್ಲವನ್ನೂ ಮುಗಿಸಿ ಮನೆಗೆ ಹೊರಡುವಾಗ ಕೆಲವು ಮಕ್ಕಳು ಸಮೀಪದಲ್ಲಿಯೇ ಮನೆಯಿರುವುದರಿಂದ ನಡೆದುಕೊಂಡು ಹೋಗುವುದಾಗಿ ತಿಳಿಸಿದರು. ಇನ್ನೂ ಕೆಲವರು ಸೈಕಲ್ ತಂದಿದ್ದು ದೂರದಲ್ಲಿ ನಿಲ್ಲಿಸಿದ್ದೇವೆ ಎಂದು ಅತ್ತ ಕಡೆ ಹೊರಟರು. ಹಲವು ಮಕ್ಕಳು ಶಾಲಾ ಬಸ್ಲಿ ಬಂದಿದ್ದರಿ0ದ ಬಸ್ ಕಡೆಗೆ ನಡೆಯತೊಡಗಿದರು. ನಾನೂ ಗಾಡಿಯನ್ನು ಶಾಲಾ ಬಸ್ ಸಮೀಪದಲ್ಲಿ ನಿಲ್ಲಿಸಿದ್ದರಿಂದ ಆ ಕಡೆಗೆ ಮಕ್ಕಳೊಂದಿಗೆ ಮಾತನಾಡುತ್ತ ಹೊರಟೆ. ಅಷ್ಟರಲ್ಲಿ ಕೆಲವು ಪೋಷಕರು ನಾವು ಅಲ್ಲಿಗೆ ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತೇವೆ. ಎಂದು ಕಾಲ್ ಮಾಡಿದರು. ಅವರುಗಳು ಬಂದಾಗ ಮಕ್ಕಳನ್ನು ಕಳಿಸಿಕೊಟ್ಟೆವು. ದಾರಿಯುದ್ಧಕ್ಕೂ ಯೋಗ ಮಾಡಿದ್ದು, ಚೆನ್ನಾಗಿ ತಿಂದದ್ದು, ಅದುಇದು ಎಂದು ಮಾತನಾಡುತ್ತ, ನಗುತ್ತಾ ಬಸ್ ಬಳಿಗೆ ಬಂದೆವು. ಎಲ್ಲರನ್ನೂ ಅಲ್ಲಿಂದ ಬೀಳ್ಕೊಟ್ಟೆವು. ಬೆಳಗ್ಗೆ 7.00 ಕ್ಕೆ ಬಂದಿದ್ದ ಬಂದಿದ್ದ ಮಕ್ಕಳು 10.30ರ ತನಕ ಬೇರೊಂದು ರೀತಿಯಲ್ಲಿಯೇ ಸಮಯವನ್ನು ಕಳೆದರು. ಮರೆಯದ ಕ್ಷಣವಾಗಿತ್ತು ಎಂಬುದರಲ್ಲಿ ಅನುಮಾನವೇ ಇರಲಿಲ್ಲ.
ಮರುದಿನ ಕೆಲವು ಮಕ್ಕಳು ಶಾಲೆಗೆ ಬಂದಿರಲಿಲ್ಲ ಕೇಳಿದರೆ ‘ಫುಡ್ ಪಾಯಿಸನ್’ ಎಂದು ಕಾರಣ ನೀಡಿದರು. ತದನಂತರ ತಿಳಿದುಬಂದದ್ದು ಏನೆಂದರೆ ಅಲ್ಲಿ ನೀಡಿದ್ದ ತಿಂಡಿ, ಮಜ್ಜಿಗೆ, ಎಳ್ಳುಬೆಲ್ಲ ಎಲ್ಲವೂ ಸೇರಿದ್ದರ ಪರಿಣಾಮ ಎಂಬುದು ತಿಳಿಯಿತು. ಬಹಳಷ್ಟು ಮಕ್ಕಳು ಆರಾಮಾಗಿದ್ದರು. ಕೆಲವು ಮಕ್ಕಳು ಮಾತ್ರ ಈ ರೀತಿಯಲ್ಲಿ ಬಳಲಿದ್ದರು. ಅಷ್ಟರಲ್ಲಿ ಶ್ರೀವತ್ಸ ‘ಇವರುಗಳಿಗೆ ಚೆನ್ನಾಗಿ ತಿನ್ನೋಕೂ ಬರಲ್ಲ, ತಿಂದಿದ್ದನ್ನು ಅರಗಿಸಿಕೊಳ್ಳೋದು ಗೊತ್ತಿಲ್ಲ’ ಎಂದು ತಾನು ಮಾತ್ರ ಊಟದ ವಿಷಯದಲ್ಲಿ ಆರಾಮಾಗಿ ಇದೀನಿ ಎಂದು ನಕ್ಕ.
ಇವೆಲ್ಲವೂ ಈಗ ನೆನಪಾಗುತ್ತವೆ. ಒಂದಿಷ್ಟು ಸಮಯ ಶಾಲೆಯಿಂದ ಹೊರಗೆ, ಶಾಲಾ ಮಕ್ಕಳ ಜೊತೆಗಿದ್ದದ್ದು. ಯೋಗ ಮಾಡಿದ್ದು, ತಿಂಡಿ ತಿಂದದ್ದು, ಫೋಟೋ ಎಂದು ನಕ್ಕಿದ್ದು ಎಲ್ಲವೂ ಸುಂದರ ಸಮಯವಾಗಿದ್ದಂತು ಸುಳ್ಳಲ್ಲ…
ಚೇತನ್ ಸಿ ರಾಯನಹಳ್ಳಿ