Entertainmentಮನರಂಜನೆ

ನಮ್ಮನ್ನ ನೋಡೋಕೆ ನಿಮ್ಮ ಟಿ.ವಿ ಕ್ಯಾಮರಾ ಹಿಡ್ಕೊಂಡು ಬಂದಿದೀರಲ್ಲ, ಈಗ ಖುಷಿ ಆಯ್ತು!!.

ನಮ್ಮನ್ನ ನೋಡೋಕೆ ನಿಮ್ಮ ಟಿ.ವಿ ಕ್ಯಾಮರಾ ಹಿಡ್ಕೊಂಡು ಬಂದಿದೀರಲ್ಲ, ಈಗ ಖುಷಿ ಆಯ್ತು!!.

(ARTICAL): ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಹತ್ತಿರವಾಗುತ್ತಿರುವ ಸಮಯ. ಕಳೆದ ಬಾರಿ ನಮ್ಮ ಶಾಲೆಯ ಮಕ್ಕಳು ಶಿವಮೊಗ್ಗ ನಗರದ ಮೂರು ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದರು. ಕಸ್ತೂರಬಾ ಶಾಲೆ, ಬಸವೇಶ್ವರ ಶಾಲೆ ಮತ್ತು ಮೇನ್‌ಮಿಡ್ಲಿಸ್ಕೂಲ್‌ನಲ್ಲಿ ಮೂರು ಸಮೀಪದಲ್ಲಿಯೇ ಇದ್ದವು. ಒಂದೊoದು ಶಾಲೆಗೆ ಇಬ್ಬಿಬ್ಬರು 1೦ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ತೆಗೆದುಕೊಳ್ಳುತ್ತಿದ್ದ ಶಿಕ್ಷಕರನ್ನು ನಿಯೋಜಿಸಿದ್ದರು. ಮಕ್ಕಳು ಪರೀಕ್ಷೆಗೆ ಬಂದಾಗ ಅವರಿಗೆ ಒಂದಿಷ್ಟು ಧೈರ್ಯವನ್ನು ಹೇಳಿ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ಹುರಿದುಂಬಿಸಿ ಕಳಿಸುವ ಜವಾಬ್ದಾರಿಯನ್ನು ನೀಡಿದ್ದರು.

1೦ನೇ ತರಗತಿಯ ಶಿಕ್ಷಕರಾಗಿದ್ದ ನಮ್ಮಗಳಿಗೆ ಕಸ್ತೂರಬಾ ಶಾಲೆಗೆ ಬರುವ ಮಕ್ಕಳ ಜವಾಬ್ದಾರಿಯನ್ನು ನೀಡಿದ್ದರು. ನಮ್ಮ ವಿಷಯದ ಪರೀಕ್ಷೆಗಳಿದ್ದಾಗ ಮೂರು ಕೇಂದ್ರಗಳಿಗೂ ಹೋಗಿಬರಬೇಕು ಎನಿಸುತ್ತಿತ್ತು. ಗಾಡಿ ಇದ್ದ ಕಾರಣ, ಜೊತೆಗೆ ಮೂರು ಕೇಂದ್ರಗಳೂ ಸಮೀಪದಲ್ಲಿಯೇ ಇದ್ದುದರಿಂದ ಹೋಗಿಬರಬಹುದಿತ್ತು. ಮಕ್ಕಳು ಪರೀಕ್ಷಾಕೇಂದ್ರದ ಒಳಗೆ ಹೋಗುವ ಮೊದಲು ಮಾತನಾಡಿಸಿಕೊಂಡು ಬರಬೇಕಿತ್ತು. ಹಾಗಾಗಿ ಮೊದಲು ಬಿ.ಹೆಚ್ ರಸ್ತೆಯ ಶಾಲೆಯ ಮಕ್ಕಳನ್ನು ಮಾತನಾಡಿಸಿಕೊಂಡು ನಂತರ ಬಸವೇಶ್ವರ ಶಾಲೆಯಲ್ಲಿದ್ದ ಮಕ್ಕಳನ್ನು ಮಾತನಾಡಿಸಿ ಕಡೆಯದಾಗಿ ಕಸ್ತೂರಬಾ ಶಾಲೆಗೆ ಬಂದು ಎಲ್ಲಾ ಮಕ್ಕಳನ್ನು ಮಾತನಾಡಿಸಿ ಎಲ್ಲರೂ ಒಳಗೆ ಹೋದ ನಂತರ ನಾವುಗಳು ಶಾಲೆಗೆ ತೆರಳುತ್ತಿದ್ದೆವು.

ಇಂಗ್ಲೀಷ್ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳಿದ್ದ ಸಮಯದಲ್ಲಿ ಮಂಜುಳಾ ಮೇಡಂ ತಾವು ಕೂಡು ಮೂರು ಪರೀಕ್ಷಾಕೇಂದ್ರಗಳಿಗೆ ಭೇಟಿ ನೀಡಬೇಕು ಎನ್ನುತ್ತಿದ್ದರು. ಆದ ಕಾರಣ ಅವರ ಗಾಡಿಯಲ್ಲಿಯೇ ಮೂರು ಕೇಂದ್ರಗಳಿಗೂ ಅವರೊಂದಿಗೂ ಹೋಗಿ ಬರುತ್ತಿದ್ದೆ. ಆ ಮೂಲಕವು ಎಲ್ಲಾ ಮಕ್ಕಳನ್ನು ಮಾತನಾಡಿಸಿ ಬರುತ್ತಿದ್ದೆವು. ಕೆಲವು ಮಕ್ಕಳು ಮೊದಲೇ ಬಂದು ಒಂದಿಷ್ಟು ಗೆಳೆಯರ ಬಳಗದೊಂದಿಗೆ ಪಾಠ-ಪದ್ಯಗಳ ಬಗ್ಗೆ ಚರ್ಚಿಸುತ್ತಿದ್ದರು. ಕೆಲವರು ತಡವಾಗಿ ಬರುತ್ತಿದ್ದರು. ಕೆಲವೊಮ್ಮೆ ಗಡಿಬಿಡಿಯಲ್ಲಿ ಬಂದ ಮಕ್ಕಳನ್ನು ಮಾತನಾಡಿಸಿ ಹೊರಡುತ್ತಿದ್ದೆವು.

ಚಿತ್ರ ರಚನೆ: ನವ್ಯ ಆರ್ ಕಶ್ಯಪ್
9ನೇ ತರಗತಿ, ಸಾಂದೀಪನಿ ಆಂಗ್ಲಶಾಲೆ, ಶಿವಮೊಗ್ಗ



1೦ನೇ ತರಗತಿಯ ಶಿಕ್ಷಕನಾದ್ದರಿಂದ ನನ್ನ ವಿಭಾಗದ ಮಕ್ಕಳು ಮೂರು ಕೇಂದ್ರಗಳಲ್ಲೂ ಇದ್ದರು. ಎಲ್ಲರನ್ನೂ ಮಾತನಾಡಿಸಿಕೊಂಡು ಬರಬೇಕು ಎಂಬುದoತೂ ಆಸೆಯಾಗಿತ್ತು. ಆದರೆ ಮೂರು ಕೇಂದ್ರಗಳಿಗೂ ಹೋಗಬೇಕೆಂದರೆ ಒಂದಿಷ್ಟು ಸಮಯ ಮಾತ್ರ ಪ್ರತೀ ಕೇಂದ್ರಗಳಲ್ಲೂ ಇರಬೇಕಿತ್ತು. ಆ ಸಮಯದೊಳಗಾಗಿ ಬಂದ ಮಕ್ಕಳನ್ನು ಮಾತನಾಡಿಸಿ ತೆರಳುತ್ತಿದ್ದೆ. ಕಳೆದ ವರ್ಷವೂ ಇದೇ ರೀತಿಯಲ್ಲಿತ್ತು. 1೦ನೇ ತರಗತಿಯ ಸಿ ವಿಭಾಗದ ಅನೇಕ ಮಕ್ಕಳು ಕಸ್ತೂರಬಾ ಶಾಲೆಯಲ್ಲಿದ್ದರು. ಎಲ್ಲಾ ಮಕ್ಕಳನ್ನು ಮಾತನಾಡಿಸಬೇಕು ಎಂಬ ಆಸೆ ಇದ್ದೇ ಇತ್ತು. ಮೊದಲ ದಿನವೇ ಕನ್ನಡ ಪರೀಕ್ಷೆ ಹಾಗಾಗಿ ಮೂರು ಕೇಂದ್ರಗಳಿಗೂ ಭೇಟಿ ನೀಡಬೇಕಿತ್ತು. ಹೇಗಿದ್ದರೂ ಕಸ್ತೂರಬಾ ಶಾಲೆಗೆ ಕಡೆಯದಾಗಿ ಬಂದು, ಅಲ್ಲಿಯೇ ಹೆಚ್ಚಿನ ಸಮಯ ಕಳೆದು ಪರೀಕ್ಷೆ ಆರಂಭವಾಗುವವರೆಗೂ ಹೊರಗೆ ನಿಂತು ಸಿಕ್ಕ ಪೋಷಕರೊಂದಿಗೆ ಮಾತನಾಡಿ ತೆರಳುತ್ತಿದ್ದೆವು. ಪರೀಕ್ಷೆ ಬರೆಯುವ ಮಕ್ಕಳಿಗಿಂತಲೂ ಪೋಷಕರಿಗೆ ಹೆಚ್ಚು ಚಿಂತೆ ಶುರುವಾಗಿದ್ದಂತೆ ಇರುತ್ತಿತ್ತು.

ಅಂದು ಎಸ್.ಎಸ್.ಎಲ್.ಸಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ. ಎಲ್ಲಾ ಮಕ್ಕಳಿಗೂ ಪ್ರವೇಶಪತ್ರವನ್ನು ನೀಡಿ, ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿಸುತ್ತ, ಎಲ್ಲರಿಗೂ ಶುಭ ಹಾರೈಸುವ ಹೊತ್ತಿಗೆ ಎಲ್ಲಾ ಮಕ್ಕಳು ನಮ್ಮ ಪರೀಕ್ಷಾಕೇಂದ್ರಕ್ಕೆ ಬಂದು ಹೋಗಿ ಎಂದು ಕೇಳಿಕೊಳ್ಳುತ್ತಿದ್ದರೆ, ನನ್ನ 1೦ನೇ ತರಗತಿಯ ಸಿ ವಿಭಾಗದಲ್ಲಿದ್ದ ಆತ್ಮೀಯ ಮಗಳಾಗಿದ್ದ ಚಿನ್ಮಯಿ ಮಾತ್ರ, ‘ನೀವು ಯಾವ ಎಕ್ಸಾಂ ಸೆಂಟರ್‌ಗೆ ಹೋಗ್ತಿರೋ, ಬಿಡ್ತಿರೋ ಗೊತ್ತಿಲ್ಲ ಸರ್. ಏನಾದರೂ ಮಾಡಿ ಆದರೆ ನಮ್ಮ ಪರೀಕ್ಷಾಕೇಂದ್ರಕ್ಕೆ ಬರಲೇಬೇಕು, ನಿಮ್ಮನ್ನು ನೋಡಿ ಮಾತನಾಡಿಸಿದ ಮೇಲೆಯೇ ನಾನು ಪರೀಕ್ಷೆ ಬರೆಯೋದು’ ಅಂತ ‘ರಿಕ್ವೆಸ್ಟ್’ ಅಲ್ಲ ‘ಆರ್ಡರ್’ ಮಾಡಿದ್ಲು. ಅವಳ ಜೊತೆಗಿದ್ದ ಗೆಳತಿಯರೆಲ್ಲ ಅವಳೆಗೆಡೆಗೆ ಬೆರಗಾಗಿ ನೋಡುತ್ತಿದ್ದರು. ‘ನಮ್ಮ ಸರ್, ನನ್ನಿಷ್ಟ, ಅವರು ಆಗಲ್ಲ ಅಂತ ಹೇಳಲ್ಲ, ಯಾಕೆಂದರೆ ನಮ್ಮ ಶಾಲಾ ಲೈಫ್ ಮುಗೀತಾ ಬಂತು. ಹಾಗಾಗಿ ನಮ್ಮ ಕೊನೆಯ ಬೇಡಿಕೆ ಇದು. ನಡೆಸಿಕೊಡ್ತಾರೆ ಅಷ್ಟೇ’ ಅಂತ ನನ್ನ ಒಪ್ಪಿಗೆಯನ್ನೂ ತೆಗೆದುಕೊಳ್ಳದೇ ಎಲ್ಲವನ್ನೂ ಆಕೆಯೇ ನುಡಿದಿದ್ದಳು. ಎಲ್ಲರೂ ನನ್ನ ಪ್ರತಿಕ್ರಿಯೆಗಾಗಿ ನೋಡಿದರು. ‘ಚಿನ್ನಕ್ಕ ಹೇಳಿದಳಲ್ಲ, ಅಷ್ಟೇ ಅನಿವರ‍್ಯ ನಡೆಸಿಕೊಡಲೇಬೇಕಿದೆ’ ಎಂದೆ.

ಚಿನ್ಮಯಿ ತುಂಬಾನೇ ಮಾತನಾಡುವವಳು. ಇದು ಅವಳನ್ನು ಬಲ್ಲವರಿಗೆಲ್ಲ ಗೊತ್ತಿರುವ  ಸತ್ಯ. ಅವಳ ಆತ್ಮೀಯ ಗೆಳತಿ ಐಶ್ವರ್ಯಳನ್ನು ಹೊರತುಪಡಿಸಿದರೆ ನನ್ನ ಬಳಿಯೇ ಹೆಚ್ಚು ಮಾತನಾಡುತ್ತಿದ್ದಳು. ಏನೇ ವಿಷಯವಿದ್ದರೂ ಹೇಳಿಕೊಳ್ಳುತ್ತಿದ್ದಳು. ಈಕೆ ಪುಟ್ಟಮಗುವಾಗಿದ್ದಾಗಲೇ ಈಕೆಯ ತಾತನ ಪರಿಚಯವಿದ್ದುದರಿಂದ ಒಂದಿಷ್ಟು ಸಲುಗೆಯಿಂದಲೇ ನನ್ನ ಜೊತೆಗೆ ಮಾತನಾಡುತ್ತಿದ್ದಳು. ಹಾಗಾಗಿ ಆಗಾಗ ‘ರಿಕ್ವೆಸ್ಟ್’ ಮಾಡುತ್ತಿದ್ದವಳು. ಮಗಳಂತೆ ಆತ್ಮೀಯತೆ ಇದ್ದಿದ್ದರಿಂದ ಶಾಲಾ ಜೀವನ ಮುಗಿಯುವ ಸಮಯಕ್ಕೆ ‘ಆರ್ಡರ್’ ಮಾಡುತ್ತಿದ್ದಾಳೆ ಎನಿಸಿತು.

ಅಂದು ಎಸ್.ಎಸ್.ಎಲ್.ಸಿ ಪರೀಕ್ಷೆ. ಮೂರು ಕೇಂದ್ರಗಳಿಗೂ ಹೋಗಬೇಕಿತ್ತು. ಮೊದಲು ಮೇನ್‌ಮಿಡ್ಲಿಸ್ಕೂಲ್‌ಗೆ ಹೋದೆ. ಬಂದಿದ್ದ ಒಂದಿಷ್ಟು ಮಕ್ಕಳನ್ನು ಮಾತನಾಡಿಸಿ, ಅವರೊಂದಿಗಿದ್ದ ಪೋಷಕರನ್ನೂ ಮಾತನಾಡಿಸಿ ಇನ್ನೂ ಎರಡು ಕೇಂದ್ರಗಳಿಗೂ ಭೇಟಿ ನೀಡಬೇಕಿದ್ದ ಕಾರಣ ಅಲ್ಲಿಂದ ಹೊರಟೆ, ಬಸವೇಶ್ವರ ಶಾಲೆಯಲ್ಲಿದ್ದ ಮಕ್ಕಳನ್ನು ಮಾತನಾಡಿಸಿ ಪರೀಕ್ಷೆಗೆ ಶುಭಾಶಯಗಳನ್ನು ತಿಳಿಸಿ ಕಸ್ತೂರಬಾ ಶಾಲೆಗೆ ಬರುವ ವೇಳೆಗೆ ಇನ್ನೂ ಸಮಯವಿದ್ದರೂ ಅದಾಗಲೇ ಎಲ್ಲಾ ಮಕ್ಕಳನ್ನು ಒಳಗೆ ಕಳಿಸಿದ್ದರು. ಮಕ್ಕಳನ್ನು ಮಾತನಾಡಿಸಬೇಕಿತ್ತು. ಆದರೆ ಆಗಿರಲಿಲ್ಲ. ಅಲ್ಲಿ ವಿಚಾರಿಸಿದಾಗ ಮಕ್ಕಳನ್ನು ಹೊರತುಪಡಿಸಿ ಯಾರನ್ನೂ ಬಿಡುವುದಿಲ್ಲ ಎಂದರು. ಮೊದಲೇ ಚಿನ್ನಕ್ಕ ಆರ್ಡರ್ ಬೇರೆ ಮಾಡಿದ್ದಳು. ನನ್ನನ್ನು ಮಾತನಾಡಿಸದೇ ಹೋದರೂ ಆಕೆ ಪರೀಕ್ಷೆ ಬರೆಯುತ್ತಾಳೆ ಅದರಲ್ಲೇನೂ ಅನುಮಾನವಿಲ್ಲ. ಆದರೆ, ನಾನು ಬಂದೇ ಬರುತ್ತೇನೇ, ಮಾತನಾಡಿಸುತ್ತೇನೆ ಎಂದು ಕೊಟ್ಟ ಮಾತು ಉಳಿಸಿಕೊಳ್ಳಲು ಆಗುತ್ತಿಲ್ಲವಲ್ಲ ಎನಿಸಿತು. ಏನು ಮಾಡುವುದೋ ಎಂದು ತೋಚದಾದಾಗ ‘ಮೀಡಿಯಾ’ದವರಿಗೆ ಒಳಗೆ ಪ್ರವೇಶವಿತ್ತು. ಶಿಕ್ಷಕ ವೃತ್ತಿಯ ಜೊತೆಗೆ ಸಂಜೆ ಬಿಡುವಿದ್ದಾಗ ನಮ್ಮ.ಟಿ.ವಿ ಶಿವಮೊಗ್ಗದಲ್ಲಿ ನಿರೂಪಕನಾಗಿ ಕೆಲಸ ಮಾಡುತ್ತಿದ್ದೆ. ಅಷ್ಟರಲ್ಲಿ  ನಮ್ಮ.ಟಿ.ವಿಯ ಕ್ಯಾಮರಾಮೆನ್ ಕೊಟ್ರೇಶ್ ಬಂದ ಅವನಿಗೆ ನನ್ನ ವಿಷಯವನ್ನು ಹೇಳಿದ ನಂತರ, ‘ಅಣ್ಣಯ್ಯ ನಿನಗೆ ಇಲ್ಲದ್ದಾ ತಗೋ…’ ಎಂದು ಕ್ಯಾಮರಾ ಕೊಟ್ಟು ರೆಕಾರ್ಡಿಂಗ್ ಮಾಡುವ ಬಗ್ಗೆ ತಿಳಿಸಿಕೊಟ್ಟ. ಕ್ಯಾಮರಾ ತೆಗೆದುಕೊಂಡು ಶಾಲಾ ಕೊಠಡಿಗಳಿಗೆ ತೆರಳಿದೆ. ಅಲ್ಲಿದ್ದ ಹಲವಾರು ಮಕ್ಕಳನ್ನು ಮಾತನಾಡಿಸಿ, ಎಲ್ಲರಿಗೂ ಪರೀಕ್ಷೆಗೆ ಶುಭಾಶಯಗಳನ್ನು ತಿಳಿಸಿದೆ. ಚಿನ್ಮಯಿ ಇದ್ದ ಕೊಠಡಿಯಲ್ಲೂ ಚಿತ್ರೀಕರಣ ಮಾಡಿಕೊಂಡು ಆಕೆಯನ್ನೂ ಮಾತನಾಡಿಸಿದೆ. ಅಲ್ಲಿಯೇ ಇದ್ದಂತಹ ನಮ್ಮ ಶಾಲೆಯ ಮಕ್ಕಳು, ‘ಇದೇನು ಸರ್ ಪಾಠ ಮಾಡೋದು ಬಿಟ್ಟು ವೀಡಿಯೋ ಮಾಡೋಕೆ ಶುರು ಮಾಡಿದ್ದೀರಿ? ಎಂದರು. ‘ಹ… ಎಲ್ಲಾ ನಿಮಗಾಗಿಯೇ, ಎಲ್ಲರನ್ನೂ ಒಳಗೆ ಬಿಟ್ಟಿದ್ದರು. ಟೀಚರ್‌ಗಳಿಗೆ ಬಿಡಲ್ಲ ಅಂದರು. ಹಾಗಾಗಿ ನಮ್ಮ.ಟಿ.ವಿ ಯ ಕ್ಯಾಮರಾ ತಗೊಂಡು ಬಂದಿದೀನಿ, ರೆಕಾರ್ಡಿಂಗ್ ಕೂಡ ಮಾಡ್ತಾ ಇದೀನಿ. ಸಂಜೆ ವಾರ್ತೆಲಿ ಬರತ್ತೆ ನೋಡಿ, ಅದಕ್ಕೂ ಮೊದಲು ಪರೀಕ್ಷೆನ ಚೆನ್ನಾಗಿ ಬರೀರಿ’ ಎಂದು ಹೇಳಿದೆ. ಅಲ್ಲಿಯೇ ಇದ್ದ ಚಿನ್ಮಯಿಗೆ, ‘ನೋಡಮ್ಮ ಕೊಟ್ಟ ಮಾತಿನ ಪ್ರಕಾರ ಪರೀಕ್ಷಾಕೇಂದ್ರಕ್ಕೆ ಬಂದಿದಿನಿ. ಈಗ ಸಮಾಧಾನವಾ?’ ಎಂದಾಗ, ‘ನೀವು ಬರದೇ ಇದ್ದದ್ದು ನೋಡಿ, ಬೇಜಾರಾಗಿತ್ತು, ನಮ್ಮನ್ನ ನೋಡೋಕೆ ನಿಮ್ಮ ಟಿ.ವಿ ಕ್ಯಾಮರಾ ಹಿಡ್ಕೊಂಡು ಬಂದಿದೀರಲ್ಲ, ಈಗ ಖುಷಿ ಆಯ್ತು’. ಎಂದಳು. ಎಲ್ಲರಿಗೂ ‘ಚೆನ್ನಾಗಿ ಪರೀಕ್ಷೆ ಬರೀರಿ. ನಮ್ಮ ಶಾಲೆಯಲ್ಲಿ ಇದ್ದಷ್ಟು ಕಷ್ಟ ಇರಲ್ಲ… ಎಲ್ಲಾರಿಗೂ ಒಳ್ಳೆಯದಾಗಲಿ’ ಎಂದು ಚಿನ್ನಕ್ಕನ ಜೊತೆಗೆ ಸಿಕ್ಕ ಎಲ್ಲಾ ಮಕ್ಕಳಿಗೆ ಶುಭ ಹಾರೈಸಿ ಕ್ಯಾಮರಾ ಹಿಡಿದು ನಡೆದೆ. ಹೊರಗೆ ಬಂದ ಮೇಲೆ ತಿಳಿಯಿತು. ಇನ್ನೂ  ಒಂದೆರಡು ವಿದ್ಯಾರ್ಥಿಗಳು ಸಿಗಲಿಲ್ಲ ಎಂದು. ಆದರೆ ಈಗ ಮತ್ತೆ ಹೋಗುವಂತಿರಲಿಲ್ಲ.
ಅoತೂ ಒಂದು ಪರೀಕ್ಷಾ ಕೇಂದ್ರದ ಮಕ್ಕಳನ್ನು ನೋಡಿ ಮಾತನಾಡಿಸಲು ಆಗುತ್ತೋ ಇಲ್ಲವೋ ಎಂದು ಕೊಂಡಿದ್ದೆ. ಗೆಳೆಯ ಕೊಟ್ರೇಶನ ಸಹಾಯದಿಂದ ಮಕ್ಕಳನ್ನು ಭೇಟಿ ಮಾಡಲು ಸಾಧ್ಯವಾಯಿತು. ಹೊರಗೆ ಬಂದು ಆತನಿಗೆ ಧನ್ಯವಾದಗಳನ್ನು ಹೇಳಿದೆ. ಅಷ್ಟರಲ್ಲಿ, ‘ಅಣ್ಣ ಇನ್ನೊಂದು ಶಾಲೆಲೂ ರೆಕಾರ್ಡಿಂಗ್ ಮಾಡೋದು ಇದೆ ಬರ್ತಿರಾ?’ ಎಂದು ತಮಾಷೆಗೆ ಕೇಳಿದ, ‘’ಇವತ್ತು ಬೇಡ ಬೇರೆ ದಿನ ಬರ್ತಿನಿ ಆಗಬಹುದಾ?’ ಎಂದೆ. ನಕ್ಕು ಅಲ್ಲಿಂದ ಹೊರಟ. ಅಷ್ಟರಲ್ಲಿ ಅಲ್ಲಿದ್ದ ಪೋಷಕರೊಂದಿಗೆ ಮಾತನಾಡುತ್ತಿದ್ದಾಗ, ನನ್ನ ಈ ದೊಂಬರಾಟವನ್ನು ಗಮನಿಸಿದ್ದ ಒಬ್ಬ ಪೋಷಕರು, ‘ಅನ್ಕೊಂಡೆ ಸರ್ ನೀವು ಮಕ್ಕಳನ್ನು ಮಾತಾಡಿಸಲು ಏನಾದರೂ ಪ್ರಯತ್ನ ಮಾಡೇ ಮಾಡ್ತಿರ ಅಂತ. ನೀವು ಮಾತಾಡಿಸಿದರೆ ಮಕ್ಕಳು ಖುಷಿಯಾಗಿಯೇ ಪರೀಕ್ಷೆ ಬರೀತಾರೆ ಬಿಡಿ’ ಎಂದರು. ಆದರೆ ತೆಗೆದುಕೊಂಡಿದ್ದ ‘ರಿಸ್ಕ್’ ನನಗೆ ಮಾತ್ರವೇ ಗೊತ್ತಿತ್ತು.

ಕ್ಯಾಮರಾ ಹಿಡಿದುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿ ಅಲ್ಲಿದ್ದ ನಮ್ಮ ಶಾಲೆಯ ಮಕ್ಕಳನ್ನು ಮಾತನಾಡಿಸಿದಾಗ ಏನೋ ಒಂದು ನೆಮ್ಮದಿ. ಇದಂತೂ ಒಂದೊಳ್ಳೆಯ ಅನುಭವವಂತೂ ನೀಡಿತ್ತು. ಪರೀಕ್ಷ ಸಮಯದಲ್ಲಿ ಮಕ್ಕಳಿಗೆ ಅಪ್ಪೀತಪ್ಪೀ ಮಾತು ಕೊಟ್ಟರೆ ಅದನ್ನು ನಡೆಸಲು ಎಷ್ಟೆಲ್ಲಾ ಸಾಹಸ ಮಾಡಬೇಕಿದೆ ಎಂಬುದನ್ನು ಅರಿತದ್ದಾಯಿತು. ಆದರೂ ಚಿನ್ಮಯಿಗೆ ನೀಡಿದ್ದ ಮಾತು, ಅದನ್ನು ಉಳಿಸಿಕೊಳ್ಳಲು ಪಟ್ಟ ಈ ಪ್ರಯತ್ನ ಈ ರೀತಿಯಲ್ಲಿ ಆಗಬಹುದು ಎಂದುಕೊoಡಿರಲಿಲ್ಲ. ಆ ಪರೀಕ್ಷಾ ಕೇಂದ್ರದಲ್ಲಿದ್ದ ಮಕ್ಕಳು ಕ್ಯಾಮರಾ ಹಿಡಿದುಕೊಂಡು ಹೋದಾಗ ನೀಡಿದ ಆಶ್ಚರ್ಯ, ಸಂತೋಷ, ಖುಷಿ ತುಂಬಿದ ಪ್ರತಿಕ್ರಿಯೆಗಳು ಈಗಲೂ ಕಣ್ಣಮುಂದಿದೆ. ಒಂದೊಳ್ಳೆಯ ನೆನಪಾಗಿ…

Leave a Reply

Your email address will not be published. Required fields are marked *

Scan the code