Entertainmentಮನರಂಜನೆ

‘ಇಷ್ಟು ದೊಡ್ಡ ಬಹುಮಾನ ಪಡೆದಿದ್ದೀರಿ ಸ್ವೀಟ್ ಕೊಡಬೇಕು’

‘ಇಷ್ಟು ದೊಡ್ಡ ಬಹುಮಾನ ಪಡೆದಿದ್ದೀರಿ ಸ್ವೀಟ್ ಕೊಡಬೇಕು’

(ARTICAL): ‘ರಸಪ್ರಶ್ನೆ’ ನನಗಂತೂ ಬಹಳ ಇಷ್ಟದ ಸ್ಪರ್ಧೆ. ನಾನು ಶಾಲಾ ದಿನಗಳಲ್ಲಿ ಇದ್ದಾಗ ಬೇರೆಬೇರೆ ಸ್ಪರ್ಧೆಗಳಿದ್ದರೂ ಹೆಚ್ಚಿನ ಗಮನ ಇರ್ತಾ ಇದ್ದದ್ದು ರಸಪ್ರಶ್ನೆಯಲ್ಲಿ. ಯಾಕೆಂದರೆ ಬೇರೆ ಸ್ಪರ್ಧೆಗಳಲ್ಲಿ ಸೋಲು-ಗೆಲುವು ಅನ್ನೋದು ಇರ್ತಾ ಇತ್ತು. ಆದರೆ, ರಸಪ್ರಶ್ನೆಯಲ್ಲಿ ಗೆಲುವು ಸಾಧಿಸಿದವರಿಗೆ ಬಹುಮಾನ ಸಿಕ್ಕರೂ ಅದನ್ನು ನೋಡುತ್ತ ಕುಳಿತವರಿಗೂ, ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೂ ಜ್ಞಾನಾರ್ಜನೆ ದೊರಕುತ್ತಿತ್ತು ಎಂಬುದು ಮಾತ್ರ ಸುಳ್ಳಲ್ಲ.


ಮೊದಲ ಬಾರಿಗೆ ಶಾಲೆಗೆ ಬಂದಾಗ ಮುಖ್ಯೋಪಾಧ್ಯಾಯರ ಸೂಚನೆಯ ಮೇರೆಗೆ ’ಕನ್ನಡ ರಸಪ್ರಶ್ನೆ’ ಎಂಬುದನ್ನು ಆರಂಭಿಸಲು ಮುಂದಾದೆವು. ಅದರ ರೂಪುರೇಶೆಗಳನ್ನು ಮತ್ತೊಬ್ಬ ಕನ್ನಡ ಶಿಕ್ಷಕರಾದ ಚನ್ನೇಶ್ ಅವರ ಬಳಿ ಚರ್ಚಿಸಿದ್ದು, ಮುಖ್ಯೋಪಾಧ್ಯಾಯರು, ಇತರ ಪರಿಚಿತರಿಂದ ಹೇಗೆಲ್ಲಾ ರಸಪ್ರಶ್ನೆಯನ್ನು ಮಾಡಬಹುದು ಎಂಬುದನ್ನು ತಿಳಿದುಕೊಂಡು 8, 9 ಮತ್ತು 10ನೇ ತರಗತಿಯ ಒಬ್ಬೊಬ್ಬ ವಿದ್ಯಾರ್ಥಿಗಳಿರುವಂತೆ ಒಟ್ಟು ಮೂರು ವಿದ್ಯಾರ್ಥಿಗಳ ಒಂದೊಂದು ತಂಡವನ್ನು ರಚಿಸಿಕೊಳ್ಳಲು ಮಕ್ಕಳಿಗೆ ತಿಳಿಸಿದ್ದಾಯಿತು. ಅದರಂತೆ ಮಕ್ಕಳು ಪ್ರಾಥಮಿಕ ಸುತ್ತಿನಲ್ಲಿ ಬರವಣಿಗೆಯ ಮೂಲಕ ಆಯ್ಕೆಗೊಳ್ಳಬೇಕಿತ್ತು. ಅದರಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಮೊದಲ ನಾಲ್ಕು ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿಕೊಂಡು ಅವರಿಗೆಂದು ವಿಶೇಷ ಸುತ್ತುಗಳನ್ನು ಇರಿಸಲಾಗಿತ್ತು. ಚಿತ್ರವನ್ನು ನೋಡಿ ಗುರುತಿಸುವುದು, ಧ್ವನಿಯನ್ನು ಗುರುತಿಸುವುದು ಹೀಗೆ… ಬೇರೆಬೇರೆ ಸುತ್ತುಗಳ ಮೂಲಕ ರಸಪ್ರಶ್ನೆ ಮೊದಲ ಬಾರಿಗೆ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರ ಎದುರಿನಲ್ಲಿ ನಡೆಯಿತು. ನಂತರದಲ್ಲಿ ಮಕ್ಕಳಿಗೆ ಸಾಮಾನ್ಯಜ್ಞಾನದ ರಸಪ್ರಶ್ನೆಯೂ ಆಯೋಜನೆಗೊಳ್ಳಲು ಆರಂಭವಾಯಿತು. ಮೊದಮೊದಲು ಶಾಲಾ ಕಾರಿಡಾರ್ ನಲ್ಲಿ ಬೆಂಚ್ ಗಳನ್ನು ಹಾಕಿ ತಂಡದ ಸದಸ್ಯರನ್ನು ಕೂರಿಸಿ ಮೈದಾನದ ತುಂಬ ಮಕ್ಕಳು ಕೂತಿರುತ್ತಿದ್ದರು. ಮುಂದಿನ ದಿನಗಳಲ್ಲಿ ಪ್ರೊಜೆಕ್ಟರ್ ಮೂಲಕ ರಸಪ್ರಶ್ನೆಯನ್ನು ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಯಿತು.


ತಂಡಗಳನ್ನು ರಚಿಸಿಕೊಳ್ಳುವ ಹಂತದಲ್ಲಿ ಅನೇಕ ಮಕ್ಕಳು 8, 9ನೇ ತರಗತಿಯಲ್ಲಿ ಯಾರು ಚೆನಾಗಿ ಓದುತ್ತಾರೆ? ಅಥವಾ ಯಾರಿಗೆ ಜನರಲ್ ನಾಲೆಡ್ಜ್ ಬಗ್ಗೆ ಹೆಚ್ಚಿಗೆ ತಿಳಿದಿದೆ? ಅಂತ ಕೇಳ್ತಾ ಇದ್ದರು. ಕಾರಣ ಏನೆಂದರೆ ಅವರನ್ನು ಸೇರಿಸಿಕೊಂಡು ಒಂದು ತಂಡವಾಗಿ ರಚಿಸಿಕೊಂಡು ರಸಪ್ರಶ್ನೆಯಲ್ಲಿ ಭಾಗವಹಿಸುವ ಯೋಚನೆಯಿತ್ತು. ಕೆಲವರಂತೂ ತನಗೆ ತೀರ ಪರಿಚಿತ, ಬಸ್ ನಲ್ಲಿ ಒಟ್ಟಿಗೆ ಬರ್ತಿವಿ ಹಾಗಾಗಿ ಒಂದೇ ತಂಡವಾಗಿ ಇರೋಣ ಅಂತ, ಅಕ್ಕಪಕ್ಕದ ಮನೆಯವರು ಅಂತ, ಸೈಕಲ್ ಲಿ ಒಟ್ಟಿಗೆ ಬರ್ತಿವಿ ಅಂತ… ಹೀಗೆ ಏನೇನೋ ಕಾರಣಗಳಿಂದ ಒಂದು ತಂಡವಾಗಿ ಇರ್ತಾ ಇದ್ದರು. ಇನ್ನೂ ಕೆಲವರು ಯಾರೂ ಸಿಗದ ಕಾರಣ ಪ್ರತೀ ತರಗತಿಗೆ ಹೋಗಿ ’ಯಾರಾದರೂ ರಸಪ್ರಶ್ನೆಯಲ್ಲಿ ಭಾಗವಹಿಸುವುದಿದ್ದರೆ ನನ್ನ ಜೊತೆಗೆ ಬಂದು ಸೇರ್ಕೊಳ್ಳಿ’ ಎಂದು ಆಹ್ವಾನ ನೀಡುತ್ತಿದ್ದರು. ಒಟ್ಟಿನಲ್ಲಿ ಒಂದು ತಂಡವಾಗಿ ರಚನೆ ಆಗೋದರಲ್ಲಿ ಸಾಕಾಗಿರೋದು.
ಆಯ್ಕೆಯಾದ ವಿದ್ಯಾರ್ಥಿಗಳು ವೇದಿಕೆಯ ಮೇಲಿದ್ದರೆ ಆಯ್ಕೆಯಾಗದ, ಭಾಗವಹಿಸದ ಮಕ್ಕಳು ವೀಕ್ಷಕರಾಗಿ, ಪ್ರೇಕ್ಷಕರಾಗಿ ಕೂತಿರುತ್ತಿದ್ದರು. ವೇದಿಕೆಯಲ್ಲಿನ ತಂಡಗಳಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರೆ. ಕೆಳಗೆ ಕುಳಿತಿದ್ದ ವಿದ್ಯಾರ್ಥಿಗಳು ಉತ್ತರ ಹೇಳಲು ಪ್ರಯತ್ನಿಸುತ್ತಿದ್ದರು. ಕೆಲವರಂತೂ ಎಲ್ಲರಿಗೂ ಕೇಳುವಂತೆ ಹೇಳುತ್ತಿದ್ದರು. ಹಾಗಾಗಿ ಆ ರೀತಿಯ ತೊಂದರೆ ತಪ್ಪಿಸಲು ಪ್ರತೀ ಸುತ್ತಿನ ಕೊನೆಯಲ್ಲಿ ’ವೀಕ್ಷಕರಿಗಾಗಿ ಪ್ರಶ್ನೆಗಳು’ ಎಂದಾಗ ಆ ಸಮಯಕ್ಕಾಗಿ ಕಾಯುತ್ತಿದ್ದರು. ’ಪ್ರತಿಭಾಕಾರಂಜಿ’ ಯ ರಸಪ್ರಶ್ನೆಗೆ ಮೊದಮೊದಲು ನಾವೇ ಮಕ್ಕಳಿಗೆ ’ಇವನು ಅಥವಾ ಇವಳು ರಸಪ್ರಶ್ನೆಗೆ ಇರಲಿ’ ಎನ್ನುತ್ತಿದ್ದೆವು. ಈಗೀಗ ರಸಪ್ರಶ್ನೆಗೆ ಪೈಪೋಟಿ ಆರಂಭವಾಗಿದೆ. ’ರಸಪ್ರಶ್ನೆಗೆ ಬರುತ್ತೇವೆ’ ಎನ್ನುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿ ಅವರುಗಳಿಗೆ ಒಂದು ಸಣ್ಣ ಪ್ರಶ್ನಾವಳಿಯನ್ನು ನೀಡಿ ಅದರಲ್ಲಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳ ತಂಡವನ್ನು ರಚಿಸಿ ಕಳಿಸಲಾಗುತ್ತಿತ್ತು.


ಇತರ ಶಾಲೆಗಳಲ್ಲಿ, ಸಂಘಸಂಸ್ಥೆಗಳಲ್ಲಿ ರಸಪ್ರಶ್ನೆ ಆಯೋಜಿಸಿದರೆ ಆಗಾಗ ಆ ಜವಾಬ್ದಾರಿ ನನಗೆ ಬರುತ್ತಿತ್ತು. ಒಮ್ಮೆ ಶಿವಮೊಗ್ಗ ನಗರದ ಆಕ್ಸಫರ್ಡ್ ಶಾಲೆಯಲ್ಲಿ ರಸಪ್ರಶ್ನೆಯನ್ನು ಆಯೋಜಿಸಿದ್ದರು. ಮೂರು ವಿದ್ಯಾರ್ಥಿಗಳ ಒಂದು  ತಂಡವನ್ನು ಕಳಿಸಿಕೊಡಬೇಕಿತ್ತು.ಶಾಲೆಯ ಇತರ ರಸಪ್ರಶ್ನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಅದರಲ್ಲಿ ಆಯ್ಕೆಯನ್ನು ಮಾಡಬೇಕಿತ್ತು. ವಿದ್ಯಾರ್ಥಿಗಳು ಪಾಠಮಾಡುವಾಗ ಉತ್ತರಿಸುವ, ಸಾಮಾನಜ್ಞಾನದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದನ್ನು ಕಂಡು 1೦ನೇ ತರಗತಿಯಿಂದ ಪ್ರಣಮ್ಯ.ಆರ್, 9ನೇ ತರಗತಿಯಿಂದ ರಜತ್ ಕೃಷ್ಣ ಹತ್ವಾರ್ ಮತ್ತು ೮ನೇ ತರಗತಿಯಿಂದ ಮಾನ್ಯತಾ.ವಿ.ಎಂ ಇವರುಗಳನ್ನು ಆಯ್ಕೆ ಮಾಡಿಕೊಂಡಿದ್ದೆ. ಆ ಪಟ್ಟಿಯನ್ನು ಮುಖ್ಯೋಪಾಧ್ಯಾಯರಿಗೆ ನೀಡಿದೆ. ಆಗ ಎಸ್.ಎಸ್.ಎಲ್.ಸಿ ಶಾಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದ್ದುದರಿಂತ ಪ್ರಣಮ್ಯಳ ಬದಲು 9ನೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿಯನ್ನು ಆಯ್ಕೆಮಾಡಿಕೊಳ್ಳಬಹುದೇ? ಎಂದಾಗ, ’ಆಸಕ್ತಿ ಇದ್ದಲ್ಲಿ ಕರೆದುಕೊಂಡು ಹೋಗಿ, ಮತ್ತೊಮ್ಮೆ ಪರೀಕ್ಷೆ ನೀಡೋಣ’ ಎಂದರು. ಈ ಸುದ್ಧಿ ಪ್ರಣಮ್ಯಳಿಗೆ ಹೆಚ್ಚು ಖುಷಿ ಕೊಟ್ಟಿತು. ’ಶಾಲೆಯ ವಿದ್ಯಾರ್ಥಿನಿಯಾಗಿ ಇದೇ ಕಡೆಯ ಸ್ಪರ್ಧೆ ಎನಿಸುತ್ತಿದೆ. ಹಾಗಾಗಿ ತಪ್ಪದೇ ಭಾಗವಹಿಸುತ್ತೇನೆ’ ಎಂದಳು.
ಕೆಲವು 8,9,1೦ನೇ ತರಗತಿಯ ಮಕ್ಕಳನ್ನು ತೆಗೆದುಕೊಳ್ಳುವುದಕ್ಕಿಂತ 1೦ನೇ ತರಗತಿಯ ಮೂರು ವಿದ್ಯಾರ್ಥಿಗಳನ್ನು ತಗೊಂಡಿದ್ದರೆ ಆಗೋದಲ್ವಾ? ಅಂದರು. ನನ್ನ ಆಲೋಚನೆಯೇ ಬೇರೆ ಇತ್ತು. ಪ್ರಶ್ನೆಗಳು ಯಾವ ರೀತಿಯಲ್ಲಿ ಇರುತ್ತವೋ ಗೊತ್ತಿಲ್ಲ. ಒಂದೊಂದು ತರಗತಿಯ ಪಠ್ಯಕ್ಕೆ ಸಂಭಂಧಿಸಿದಂತೆ ಪ್ರಶ್ನೆಗಳು ಬಂದಲ್ಲಿ ಉತ್ತರಿಸಲು ಸುಲಭವಾಗುತ್ತದೆ ಎಂದುಕೊಂಡು ಈ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದಾಗಿತ್ತು.


ರಸಪ್ರಶ್ನೆಯ ದಿನದಂದು ನಮ್ಮ ಶಾಲಾಬಸ್ ಡ್ರೈವರ್ ಗಾಡ್ವಿನ್ ಅವರ ಆಟೋದಲ್ಲಿ ಮಕ್ಕಳೊಂದಿಗೆ ಆಕ್ಸಫರ್ಡ್ ಶಾಲೆಗೆ ಹೋಗಿದ್ದೆ. ಪ್ರಾಥಮಿಕ ಶಾಲೆಯ ತಂಡವೂ ಇದ್ದ ಕಾರಣ ಕಮಲ ಮೇಡಂ ಅವರು ಎಲ್ಲಾ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಮಕ್ಕಳೊಂದಿಗೆ ಪ್ರಶ್ನೋತ್ತರಗಳನ್ನು ಚರ್ಚಿಸಿ, ಗಾಬರಿ ಆಗದೆ, ಇರುವ ಸಮಯವನ್ನು ಬಳಸಿಕೊಂಡು ಉತ್ತರಿಸಿ, ನೆಗಿಟೀವ್ ಮಾರ್ಕ್ಸ್ ಕೂಡ ಇರಬಹುದು ಅದರ ಬಗ್ಗೆಯೂ ಎಚ್ಚರ ಇರಲಿ ಎಂದು ಹೇಳಿ ನನಗೆ ತರಗತಿ ಇದ್ದ ಕಾರಣ ಶಾಲೆಗೆ ಬಂದೆ. ಒಂದೆರಡು ತರಗತಿಗಳ ನಂತರ ನಮ್ಮ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳ ತಂಡ ಬರವಣಿಗೆ ಸುತ್ತಲ್ಲಿ ಯಶಸ್ವಿಯಾಗಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು ಎಂಬ ಮಾಹಿತಿ ದೊರೆಯಿತು. ಮಧ್ಯಾಹ್ನ ಅಲ್ಲಿಯೇ ಎಲ್ಲಾ ಮಕ್ಕಳಿಗೂ ಊಟದ ವ್ಯವಸ್ಥೆ ಮಾಡಿದ್ದರು. ಊಟದ ನಂತರ ಅಂತಿಮ ಸುತ್ತಿನ ರಸಪ್ರಶ್ನೆ’ ಇತ್ತು.
ಮಧ್ಯಾಹ್ನ ಒಂದಿಷ್ಟು ತರಗತಿಗಳು ಮುಕ್ತಾಯಗೊಂಡಿದ್ದವು. ಕಮಲ ಮೇಡಂಗೆ ಕಾಲ್ ಮಾಡಿದರೂ ಉಪಯೋಗ ಆಗಲಿಲ್ಲ. ಅವರೇ ಸ್ವಲ್ಪ ಸಮಯದ ನಂತರ ಕಾಲ್ ಮಾಡಿ, ಪ್ರಾಥಮಿಕ ಶಾಲೆಯ ಮಕ್ಕಳು ದ್ವಿತೀಯ ಸ್ಥಾನ, ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನದ ಮೂಲಕ ಪರ್ಯಾಯ ಪಾರಿತೋಷಕ ಗಳಿಸಿದ್ದಾರೆ. ಅಭಿನಂದನೆಗಳು’ ಎಂದರು. ನಮ್ಮಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ತಂಡವನ್ನು ಆಯ್ಕೆ ಮಾಡಿದ್ದಕ್ಕೆ ಸಾರ್ಥಕವಾಯಿತು ಎನಿಸಿತು. ಮಕ್ಕಳು ರಸಪ್ರಶ್ನೆ ಮುಗಿಸಿ ಮರಳಿ ಶಾಲೆಗೆ ಬಂದಾಗ ಅವರಿಗಂತೂ ಅದೇನು ಸಂತೋಷ. ಹೇಳತೀರದು. ಒಂದಿಷ್ಟು ಕುತೂಹಲ ಇದ್ದ ಕಾರಣ ಯಾವಯಾವ ಪ್ರಶ್ನೆಗಳಿದ್ದವು? ಎಂದು ಕೇಳಿದಾಗ ಪಠ್ಯಕ್ಕೆ ಸಂಬಂಧಿಸಿದಂತೆಯೂ ಇದ್ದವು. ಮೂವರು ಬೇರೆಬೇರೆ ತರಗತಿಯಲ್ಲಿದ್ದ ಕಾರಣ ಅವರವರ ಪಾಠದ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭವಾಯಿತು ಎಂದರು. ಮಾನ್ಯತಾ, ’ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿ ಮುಗಿಸುತ್ತಿದ್ದ ಹಾಗೆಯೇ ಉತ್ತರ ಹೇಳಿದೆ ಅದಕ್ಕೆ ಅವರು ಸ್ವಲ್ಪ ಸಮಯ ತಗೊಬೇಕು, ಪ್ರಶ್ನೆ ಕೇಳೋಕೂ ಸಮಯ ಕೊಡದೇ ಇರೋ ತರದಲ್ಲಿ ಉತ್ತರ ಕೊಡ್ತಾ ಇದೀರ ಬಹಳ ಸ್ಪೀಡ್ ಇದೀರ ನೀವು, ಎಂದಾಗ ಎಲ್ಲರೂ ನಕ್ಕರು’. ಎಂದಳು. ’ನಮಗೂ ದ್ವಿತೀಯ ಸ್ಥಾನದ ತಂಡಕ್ಕೂ 1೦ ಅಂಕಗಳ ವ್ಯತ್ಯಾಸವಿತ್ತ’ ಎಂದು ರಜತ್ ಕೃಷ್ಣ ತಿಳಿಸಿದ. ’ಅಂತೂ ಶಾಲಾ ವಿದ್ಯಾರ್ಥಿನಿಯಾಗಿ ಕಡೆಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡು ಹೋಗ್ತಾ ಇರೋದಕ್ಕೆ ಖುಷಿ ಇದೆ’ ಎಂದಳು ಪ್ರಣಮ್ಯ. ಜೊತೆಗೆ ತಾನು ಹಿಂದಿ ಏನೇನೂ ಓದಿಲ್ಲ ಹಾಗಾಗಿ ಪರೀಕ್ಷೆ ಸ್ವಲ್ಪ ದಿನಬಿಟ್ಟು ಕೊಡಿ ಎಂದಳು. ಅದಕ್ಕೆ ಸಂಬಂಧಿಸಿದಂತೆ ಅಂಬುಜಾಕ್ಷಿ ಮೇಡಂ ಹತ್ರ ವಿಚಾರಿಸಬೇಕು. ಅವರ ಪರೀಕ್ಷೆ, ಹಾಗಾಗಿ ಅವರನ್ನೇ ಕೇಳಿನೋಡು. ಬಹುಮಾನ ಗೆದ್ದಿರೋದಕ್ಕೆ ಸಣ್ಣ ರಿಯಾಯಿತಿ ಕೊಡಿ ಅಂತ ಕೇಳಿಕೊಡು’ ಎಂದೆ. ನಕ್ಕಳು ನಂತರ ಮಕ್ಕಳು ತಮ್ಮತಮ್ಮ ತರಗತಿಗಳಿಗೆ ತೆರಳಿದರು.
ಒಂದಿಷ್ಟು ದಿನಗಳ ನಂತರ ಆಕ್ಸಫರ್ಡ್ ಶಾಲೆಯ ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಣೆ ಎಂದರು. ಶಾಲೆಯಲ್ಲಿ ಆಗ ಪರೀಕ್ಷೆಗಳಿದ್ದವು. ಪ್ರಣಮ್ಯ ಮತ್ತೊಂದು ಪೂವಸಿದ್ಧತಾ ಪರೀಕ್ಷೆ ಇದ್ದ ಕಾರಣ ಹೋಗಲಿಲ್ಲ. ಇತರ ವಿದ್ಯಾರ್ಥಿಗಳು ಬಹುಮಾನ ಪಡೆದುಕೊಂಡು ಬಂದರು. ಮರುದಿನ ಶಾಲೆಯ ಪ್ರಾರ್ಥನೆಯ ಸಮಯದಲ್ಲಿ ಬಹುಮಾನ ಪಡೆದಿದ್ದ ಮಕ್ಕಳಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನವನ್ನು ನೀಡಲಾಯಿತು. ದೊಡ್ಡದಾದ ಆ ಪಾರಿತೋಷಕವನ್ನು ಮಕ್ಕಳಿಗೆ ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದ ರಾಜಶೇಖರ್ ಸರ್ ವಿತರಿಸಿದರು. ಎಲ್ಲರೂ ಆ ಪಾರಿತೋಷಕವನ್ನು ದಿಟ್ಟಿಸಿನೋಡುತ್ತಿದ್ದರು. ಭಾರವಾಗಿ ಇತ್ತು. ಮೂರು ಜನ ಪ್ರಶಸ್ತಿ ಸ್ವೀಕರಿಸಿದಾಗ ಅವರಿಗೇ ಭಾರ ಎನಿಸಿದೆ ಎಂಬುದು ನಮಗೂ ತಿಳಿಯುತ್ತಿತ್ತು. ಅಂದು ಬಹುಮಾನ ಪಡೆದ ವಿದ್ಯಾರ್ಥಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಲ್ಲಾ ಶಿಕ್ಷಕರು ಮಕ್ಕಳಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದರು. ಕೆಲವರು, ’ಇಷ್ಟು ದೊಡ್ಡ ಬಹುಮಾನ ಪಡೆದಿದ್ದೀರಿ ಸ್ವೀಟ್ ಕೊಡಬೇಕು’ ಎಂದು ಕೇಳುತ್ತಿದ್ದರು. ಒಟ್ಟಿನಲ್ಲಿ ರಸಪ್ರಶ್ನೆಗೆ ಬಂದಿದ್ದ ಬಹುಮಾನ ತಮಗೂ ಭಾಗವಹಿಸಬೇಕು ಎಂಬ ಉತ್ಸಾಹ ಅನೇಕರಲ್ಲಿ ಮೂಡಿಸಿತ್ತು.


’ರಸಪ್ರಶ್ನೆ’ ಎಂಬುದು ಸದಾ ಜ್ಞಾನದ ಕಡೆಗೆ, ಹೊಸ ವಿಷಯಗಳನ್ನು ತಿಳಿಸುವುದನ್ನು ಮಾಡಿಕೊಡುತ್ತಲೇ ಇರುತ್ತದೆ.ಸೋಲು-ಗೆಲುವು ಎಂಬುವುದಕ್ಕಿಂತ ಜ್ಞಾನದ ವಿಕಾಸವಂತೂ ಆಗಿಯೇ ಆಗುತ್ತದೆ. ಗೆದ್ದರೆ ಬಹುಮಾನ ಇಲ್ಲದೇ ಹೋದಲ್ಲಿ ತಿಳಿಯದ ಅನೇಕ ಸಂಗತಿಗಳನ್ನು ತಿಳಿಯುವ ಮೂಲಕ ತಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರವಾಯಿತು ಎಂದುಕೊಳ್ಳುತ್ತ ಸಾಗಬೇಕಿದೆ. ಯಾವುದೇ ವಿಷಯವಾಗಲಿ ಅದರಲ್ಲಿ ನಮಗೆ ಆಸಕ್ತಿ ಮೂಡಿದಲ್ಲಿ ಮಾತ್ರ ಅದರ ಆಳಕ್ಕಿಳಿಯಲು ಪ್ರಯತ್ನಿಸಬಹುದು. ಬಹುಶಃ ಈ ಮಕ್ಕಳು ಸದಾ ಕುತೂಹಲಿಗಳಾಗಿ ಹೊಸಹೊಸ ವಿಷಯಗಳನ್ನು ತಿಳಿಯಲು ಸದಾ ಸಿದ್ದರಾಗಿರುತ್ತಾರೆ ಎಂದುಕೊಳ್ಳುತ್ತೇನೆ…

Leave a Reply

Your email address will not be published. Required fields are marked *

Scan the code